ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆಯಿಂದ ಜೀವನದಲ್ಲಿ ಎತ್ತರಕ್ಕೇರಿದ ಸಾಧಕ

ಡಾ. ಎಂ.ಎಸ್.ಬಿರಾದಾರ ಸಂಸ್ಮರಣೆ ಮತ್ತು ಪರಿಶ್ರಮ ಗ್ರಂಥ ಬಿಡುಗಡೆ
Last Updated 12 ಮೇ 2022, 15:26 IST
ಅಕ್ಷರ ಗಾತ್ರ

ವಿಜಯಪುರ: ನಿಸ್ವಾರ್ಥ ಕರ್ಮಯೋಗಿಯಾಗಿದ್ದ ಲಿಂ. ಡಾ. ಎಂ.ಎಸ್.ಬಿರಾದಾರ ಗ್ರಾಮೀಣ ಬಡ ರೈತ ಕುಟುಂಬದಿಂದ ಬಂದಿದ್ದರೂ ಅವರಲ್ಲಿದ್ದ ತ್ಯಾಗ ಮತ್ತು ಸೇವಾ ಮನೋಭಾವನೆಯಿಂದ ಜೀವನದಲ್ಲಿ ಎತ್ತರಕ್ಕೆರಿದ್ದಾರೆ ಎಂದು ಧಾರವಾಡದ ವಿಶ್ರಾಂತ ಕುಲಪತಿ ಡಾ. ಬಿ.ಜಿ.ಮೂಲಿಮನಿ ಹೇಳಿದರು.

ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿಯಲ್ಲಿ ನಡೆದ ಡಾ. ಎಂ.ಎಸ್.ಬಿರಾದಾರ ಸಂಸ್ಮರಣೆ ಮತ್ತು ಪರಿಶ್ರಮ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪರಿಶ್ರಮ ಗ್ರಂಥ ಓದಿದರೆ ಸಾಕು ಡಾ. ಎಂ.ಎಸ್.ಬಿರಾದಾರ ಅವರ ನೆನಪು ಹಚ್ಚಹಸಿರಾಗುವಂತೆ ಮಾಡುತ್ತದೆ. ಅವರು ರೋಗಿಗಳೊಂದಿಗೆ ಹೊಂದಿದ್ದ ಅನೋನ್ಯ ಸಂಬಂಧ, ಸ್ಪಂದಿಸುತ್ತಿದ್ದ ರೀತಿ ರೋಗಿಗಳನ್ನು ತ್ವರಿತವಾಗಿ ಗುಣಮುಖರನ್ನಾಗಿ ಮಾಡುತ್ತಿದ್ದವು. ವೈದ್ಯ ಲೋಕಕ್ಕೆ ಅವರ ಪರಿಶ್ರಮ ಅಪಾರವಾಗಿದೆ ಎಂದರು.

ಬಿ.ಎಲ್.ಡಿ.ಇ ಸಂಸ್ಥೆ ಕಟ್ಟಲು, ಆಸ್ಪತ್ರೆ ಮತ್ತು ವಿಶ್ವವಿದ್ಯಾಲಯವನ್ನು ಬೆಳೆಸಲು ಸಾಕಷ್ಟು ಶ್ರಮಿಸಿದ್ದಾರೆ. ತಮ್ಮ ವೃತ್ತಿ, ಪ್ರವೃತ್ತಿ ಮತ್ತು ಸಂಸ್ಕೃತಿಯ ಮೂಲಕ ಎಲ್ಲರ ಮೇಲೆ ಪರಿಣಾಮ ಬೀರಿದ್ದಾರೆ. ಪ್ರತಿಯೊಬ್ಬರು ಎತ್ತರಕ್ಕೆ ಬೆಳೆಯಲು ಅವರು ಆದರ್ಶರಾಗಿದ್ದಾರೆ ಎಂದು ಹೇಳಿದರು.

ಬಡರೋಗಿಗಳಿಗೆ ನೆರವಾಗುತ್ತಾ ಸದಾ ರೋಗಿಗಳ ಹಿತಚಿಂತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆತ್ಮಾಭಿಮಾನ, ಆತ್ಮನಿರ್ಭರತೆ ಮತ್ತು ಆತ್ಮವಿಶ್ವಾಸದಿಂದ ಮೇರು ಸಾಧನೆಗೈದಿದ್ದಾರೆ. ಕೊರೊನಾ ಸಂದರ್ಭದಲ್ಲಿ ರೋಗಿಗಳ ಸೇವೆಯ ಮುಂದಾಳತ್ವವಹಿಸಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ವೈದ್ಯರಾಗಿದ್ದರು ಎಂದು ಹೇಳಿದರು.

ಯರನಾಳದ ಗುರು ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ಮದರ್ ಥೆರೆಸಾ ರೀತಿಯಲ್ಲಿ ಎಂ.ಎಸ್.ಬಿರಾದಾರ ಜನಪರ ಕಾಳಜಿ ತೋರುತ್ತಿದ್ದರು. ಸರಳ, ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು. ಕಾಯಕವನ್ನು ಪ್ರೀತಿಸಿ, ದೇವರೆಂದು ಪೂಜಿಸುತ್ತಿದ್ದರು ಎಂದು ಹೇಳಿದರು.

ಮುಧೋಳದ ವೈದ್ಯ ಡಾ. ಶಿವಾನಂದ ಕುಬಸದ, ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಎಸ್.ಮುಧೋಳ, ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮಿ,ಇಂಡಿಯ ಓಂಕಾರಾಶ್ರಮ ಸಿದ್ಧಾರೂಢ ಮಠದ ಡಾ. ಸ್ವರೂಪಾನಂದ ಸ್ವಾಮೀಜಿ, , ಡಾ. ಮಹಾಂತೇಶ ಬಿರಾದಾರ,ಬಾಪುಗೌಡ ಬಿ. ಪಾಟೀಲ, ಬಿ.ಎಲ್.ಡಿ.ಇ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜಿ.ಕೆ.ಪಾಟೀಲ, ನಿರ್ದೇಶಕ ಬಸನಗೌಡ(ರಾಹುಲ) ಪಾಟೀಲ, ಬಿ.ಎಲ್.ಡಿ.ಇ. ಡೀಮ್ಡ್ ವಿವಿ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಡಾ. ಎಂ.ಎಸ್.ಮದಭಾವಿ, ಕೆ.ಎಸ್.ಬಿರಾದಾರ, ಲಿಂ. ಎಂ.ಎಸ್.ಬಿರಾದಾರ ಅವರ ಪತ್ನಿ ಗೋದಾವರಿ ಬಿರಾದಾರ, ಪುತ್ರಿಯರು ಹಾಗೂ ಶಿಷ್ಯರು, ಅಭಿಮಾನಿಗಳು, ಸಂಬಂಧಿಕರು ಸೇರಿದಂತೆ ಉಕ್ಕಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT