ವಿಜಯಪುರ:ಅಲಮೇಲ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆಗೊಳಗಾದ ರವಿ ನಿಂಬರಗಿ ಅವರ ಕುಟುಂಬದವರನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನಿಯೋಗವು ಭೇಟಿ ಮಾಡಿ, ಸಾಂತ್ವನ ಹೇಳಿತು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ.ನೀಲಾ, ಅಫಜಲಪುರ ತಾಲ್ಲೂಕಿನ ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಬಸ್ಸಮ್ಮ ಗುತ್ತೆದಾರ, ಪ್ರಾಂತ ರೈತ ಸಂಘದ ಕಲಬುರಗಿ ಜಿಲ್ಲಾ ಮುಖಂಡ ಶ್ರೀಮಂತ ಬಿರಾದಾರ ಮತ್ತು ಸಾಹಿತಿಗಳಾದ ಡಾ.ಪ್ರಭು ಖಾನಾಪುರೆ ನಿಯೋಗದಲ್ಲಿ ಇದ್ದರು.
ಯುವಕನನ್ನು ಕೊಂದಿದ್ದಾಗಿ ಒಪ್ಪಿಕೊಂಡ ಇಬ್ಬರೊಂದಿಗೆ ಇನ್ನೂ ಆರು ಜನ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ತಮ್ಮ ಧರ್ಮದಲ್ಲದ ಯುವಕನೊಂದಿಗೆ ತಮ್ಮ ಮನೆಯ ಮಗಳು ಪ್ರೀತಿಸಿರುವುದರಿಂದ ಯುವಕನನ್ನೇ ಹತ್ಯೆ ಮಾಡಿರುವುದನ್ನು ನಿಯೋಗ ತೀವ್ರವಾಗಿ ಖಂಡಿಸಿತು.
ಜನತೆಯ ಮನಸ್ಸಿನಲ್ಲಿ ಧಾರ್ಮಿಕ ಮೂಲಭೂತವಾದ ಬೆಳೆಯುತ್ತಿರುವುದು ಅಪಾಯ ಮತ್ತು ಯುವಜನತೆಯ ಬಾಳ ಸಂಗಾತಿಯ ಆಯ್ಕೆಯ ಹಕ್ಕಿನ ಮೇಲಿನ ದಾಳಿ ಇದಾಗಿದೆ. ಯುವಜನತೆಯನ್ನು ಭಯ ಮತ್ತು ತಲ್ಲಣಕ್ಕೆ ತಳ್ಳುತ್ತಿರುವಂತಹ ಈ ಮರ್ಯಾದೆಗೇಡು ಹತ್ಯೆಗಳು ನಿಲ್ಲಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಇಲಾಖೆಯು ಕೂಡಲೇ ಉಳಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತಾಗಬೇಕು ಹಾಗೂ ಹತ್ಯೆಯಾದ ಯುವಕನ ತಾಯಿಗೆ ಪರಿಹಾರಧನ ಒದಗಿಸಿ ಅವಳ ಉಪಜೀವನಕ್ಕೆ ಆಸ್ಪದ ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು.