ತಾಳಿಕೋಟೆ: ‘ಬೀದಿ ವ್ಯಾಪಾರಿಗಳ 18 ವರ್ಷದೊಳಗಿನ ಮಕ್ಕಳಿಗೆ ಬ್ಯಾಂಕ್ನಲ್ಲಿ ಜನಧನ್ ಖಾತೆ ತೆರೆಯುವ ಅವಕಾಶಗಳಿವೆ. ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಸೇರಿದಂತೆ ಹಲವು ಯೋಜನೆಗಳಿವೆ ಅವುಗಳ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ತಿಳಿಸಿದರು.
ಅವರು ಪುರಸಭೆ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಪಟ್ಟಣದ ಪುರಸಭೆ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ ನಿಧಿ, ಸ್ವನಿಧಿ ಮೇಳ, ಸ್ವನಿಧಿಯಿಂದ ಸಮೃದ್ಧಿ ಮೇಳ, ಸ್ವನಿಧಿಯಿಂದ ಸಮೃದ್ಧಿ ಮಾಸ ಮತ್ತು ನಾನು ಕೂಡ ಡಿಜಿಟಲ್ ಹಾಗೂ ಸ್ವಾಭಿಮಾನದ ಕಡೆ ಸ್ವಚ್ಛತಾ ನಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಮನೆಮನೆಗೆ ಹಾಲು, ದಿನಪತ್ರಿಕೆಗಳನ್ನು ವಿತರಿಸುವವರು ಕೂಡ ಈ ಯೋಜನೆಗೆ ಒಳಪಡುವರು. ಸಾಲಮೇಳದಲ್ಲಿ ₹10 ಸಾವಿರ, ₹20 ಸಾವಿರ, ₹50 ಸಾವಿರದಂತೆ ಮೂರು ಹಂತಗಳಲ್ಲಿ ಸಾಲದ ಸೌಲಭ್ಯವಿದೆ’ ಎಂದರು.
ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಶಿವಾನಂದ ಜುಮನಾಳ ಮಾತನಾಡಿ, ‘ಬೀದಿ ಬದಿ ವ್ಯಾಪಾರಿಗಳು ಇಂದಿನಿಂದಲೇ ತಮಗೆ ನೀಡಿರುವ ಗುರುತಿನ ಚೀಟಿಯನ್ನು ಹಾಕಿಕೊಳ್ಳಬೇಕು. ಕಸದ ಬುಟ್ಟಿಯಲ್ಲಿ ಹಾಳಾದ ತರಕಾರಿ ಸಂಗ್ರಹಿಸಿಕೊಂಡು ಪುರಸಭೆಯ ಕಸದ ವಾಹನಕ್ಕೆ ಹಾಕಬೇಕು. ಕಸವನ್ನು ರಸ್ತೆ ಬದಿ, ದ್ವಿಭಾಜಕದಲ್ಲಿ ಹಾಕುವುದನ್ನು ನಿಲ್ಲಿಸಿ, ಸ್ವಚ್ಛತೆ ಕಾಯ್ದುಕೊಳ್ಳಬೇಕು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಬೀದಿ ವ್ಯಾಪಾರಿಗಳು, ಚರಂಡಿ ಸ್ವಚ್ಛಗೊಳಿಸಿ, ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಿ, ಕಸದ ಬುಟ್ಟಿ ವಿತರಿದಿ ಎಂದು ಮನವಿ ಮಾಡಿದರು.
ಒಟ್ಟು 311 ಜನರಿಗೆ ಗುರುತೀನ ಚೀಟಿ ಹಾಗೂ ಪರವಾನಿಗೆ ಪತ್ರ ವಿತರಣೆ ಮಾಡಲಾಯಿತು. ಪುರಸಭೆ ಸದಸ್ಯ ಮೋಹನ ಬಡಿಗೇರ, ಶಿಕ್ಷಕ ಎಸ್.ಎಸ್.ಗಡೇದ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಮಂಗಳಾ ಬಿರಾದಾರ, ಸಾವಿತ್ರಿ ಲೋಕರೆ, ಆನಂದ ನಾಯಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.