ತಾಂಬಾ(ವಿಜಯಪುರ): ಗಣೇಶನ ನಿರ್ಗಮನವಾಗುತ್ತಿದಂತೆ ಜೋಕುಮಾರನ ಆಗಮನವಾಗುತ್ತದೆ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಜೋಕುಮಾರನ ಹಬ್ಬವನ್ನು ಇಂದಿಗೂ ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದಾರೆ.
ಕುಂಬಾರರಿಂದ ತಯಾರಿಸುವ ಜೋಕುಮಾರನ ಮೂರ್ತಿಯನ್ನು ಅಂಬಿಗೇರ ಸಮಾಜದ ಮಹಿಳೆಯರು ಬಿದರಿನ ಬುಟ್ಟಿಯಲ್ಲಿ ಮೂರ್ತಿಯನ್ನು ಇಟ್ಟು ಬೇವಿನ ತಪ್ಪಲನಿಂದ ಶೃಂಗರಿಸುತ್ತಾರೆ. ಗ್ರಾಮದ ಮಹಿಳೆಯರಿಗೆ ಕರೆದು ಜೋಕುಮಾರ ಬಂದಾನ ಬರ್ರೇವ್ವ ಬಾಗಿನ ತಂದು ಜೋಕುಮಾರನಿಗೆ ಅರ್ಪಿಸಿ ಎಂದು ಹೇಳುತ್ತಾ ಭಕ್ತರು ನೀಡುವ ಪ್ರಸಾದ ಭಕ್ತಿಯಿಂದ ಪಡೆದು ನಮ್ಮ ಮನೆತವು ಉನ್ನತ ಮಟ್ಟಕ್ಕೆರಲಿ, ರೈತರು ತಮ್ಮ ಜಮೀನುಗಳಲ್ಲಿ ಮಣಿಸುತ್ತಾ (ಹೂಳುವುದು) ಭೂತಾಯಿಯಲ್ಲಿ ಉತ್ತಮ ಬೆಳೆ ಬರಲೆಂದು ಕೇಳಿಕೊಳ್ಳುವ ಮೂಲಕ ಹಾರೈಸುವ ವಿಶಿಷ್ಟ ಆಚರಣೆಯು ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿದೆ.
ಬಾದ್ರಪದ ಚೌತಿ ಮುಗಿದ ಮೇಲೆ ಹುಟ್ಟಿ ಬರುವ ಈ ಜೋಕುಮಾರನ ಮೂರ್ತಿ ಇರುವ ಬಿದರಿನ ಬುಟ್ಟಿಯನ್ನು ಹೊತ್ತ ಗ್ರಾಮದ ಮಹಿಳೆಯರು ಅಗಸರ ಮನೆ ಮತ್ತು ದೇವಸ್ಥಾನಗಳಿಗೆ ಹೋಗಿ ಜೋಕುಮಾರ ಬಂದಾನ ಜೋಕುಮಾರ, ಏಳು ದಿನಕ ಆವನ ಮರಣ. ಸಂಪೂರ್ಣ ಮಳೆ ತಂದು ರೈತರನ್ನು ಖುಷಿ ಗೊಳಿಸಿದ ಜೋಕುಮಾರ ಎಂಬ ಪದಗಳನ್ನು ಹಾಡುತ್ತಾ ಗುಣಗಾನ ಮಾಡುತ್ತಾರೆ.
ಗಣೇಶನ ಮುಖಕ್ಕೆ ಬಟ್ಟೆ:
ಈ ಆಚರಣೆಯ ವಿಶೇಷವೇನೆಂದರೆ ಗಣೇಶನ ಮುಂದೆ ಜೋಕುಮಾರ ಬರಬಾರದಂತೆ! ಜೋಕುಮಾರನ ಮುಖ ಗಣೇಶ ನೋಡಬಾರದು ಎಂಬ ನಂಬಿಯಿಂದಾಗಿ ಗಣೇಶನ ಮುಖಕ್ಕೆ ಬಟ್ಟೆ ಹಾಕುತ್ತಾರೆ. ಅದು ಇಂದಿಗೂ ಚಾಲ್ತಿಯಲ್ಲದೆ.
ಜೋಕುಮಾರನ ಮೂರ್ತಿಯನ್ನು ಹೊತ್ತು ತರುವ ಮಹಿಳೆಯರು, ಗ್ರಾಮದ ಮನೆಯವರು ಮರದಲ್ಲಿ ಜೋಳ, ಉಪ್ಪು, ಅಕ್ಕಿ, ಸಜ್ಜಿ ಇತ್ಯಾದ ದವಸ-ಧಾನ್ಯ ನೀಡುವುದು ಈ ಆಚರಣೆಯ ವಿಶೇಷ.
ಹೆಂಡತಿ ಕೊಂದ ಜೋಕುಮಾರ:
ಜೋಕುಮಾರ ಮನೆಗೆ ಬರುತ್ತಿದ್ದಂತೆ ಅಜ್ಜಿ ಜಾನಪದ ಹಾಡುತ್ತಾ ‘ಜಜ್ಜಿ ಹೆಂಡಂಡಿಯಾಗ ಕುಳಿತಿಯಲ್ಲೋ ಲಜ್ಜಗೇಡಿ, ಎದ್ದೆದ್ದು ಬಡಿಯ ಜೋಕುಮಾರ’ ಎಂದು ಹಾಡುತ್ತಾಳೆ. ಈ ವೇಳೆ ಜೋಕುಮಾರ ಮನೆಯಲ್ಲಿ ಆತನ ಹೆಂಡತಿಯು ಜೋಕುಮಾರನ ಸ್ನೇಹಿತನೊಂದಿಗೆ ಕುಳಿತು ಊಟ ಮಾಡುತ್ತಿರುತ್ತಾಳೆ. ಇದನ್ನು ಕಂಡ ಜೋಕುಮಾರನಿಗೆ ಭಾರಿ ಕೋಪ ಬರುತ್ತದೆ. ತಲೆನೋವೆಂದು ನನ್ನನ್ನು ಅಡವಿಗೆ ಹಣ್ಣು ತರಲು ಕಳಿಸಿ, ಮನೆಯಲ್ಲಿ ಇನ್ನೊಬ್ಬನೊಂದಿಗೆ ಊಟ ಮಾಡುತ್ತಿರುವುದನ್ನು ಕಂಡು ಬೈಯುತ್ತಾನೆ. ಮನೆಯೊಳಗಿದ್ದ ಕೊಡಲಿ ತೆಗೆದುಕೊಂಡು ಹೆಂಡತಿಯನ್ನು ಕಡಿದು ಹಾಕುತ್ತಾನೆ ಎಂದು ಜೋಕುಮಾರನ ಬಗ್ಗೆ ಜಾನಪದ ಕಥೆಯೂ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.