ವಿಜಯಪುರ: ಕಣ್ಣಿಗೆ ಕಾಣುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಾತ್ರ ಲೋಕಾಯುಕ್ತವೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುತ್ತದೆಯೇ ವಿನಾ ಗಮನಕ್ಕೆ ಬಾರದ ಸಂಗತಿಗಳನ್ನಲ್ಲ ಎಂದು ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ ಸ್ಪಷ್ಟಪಡಿಸಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡುವ ಸಂದರ್ಭದಲ್ಲಿ, ‘ಗುತ್ತಿಗೆ ಕಾಮಗಾರಿಯಲ್ಲಿ ಶೇ 40 ರಷ್ಟು ಕಮಿಷನ್ ಎಂಬ ಆರೋಪ ಗುತ್ತಿಗೆದಾರರಿಂದ ಕೇಳಿಬಂದಿದ್ದರೂ ಈ ಬಗ್ಗೆ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ಏಕೆ ದಾಖಲಿಸಿಕೊಳ್ಳಲಿಲ್ಲ?’ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.
‘ಕಣ್ಣಿಗೆ ಕಾಣುವ ಅಥವಾ ಅಧಿಕಾರಿ ದೊಡ್ಡ ಪ್ರಮಾಣದಲ್ಲಿ ಆಸ್ತಿ ಗಳಿಸಿದ ಸಂದರ್ಭಗಳಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬಹುದು. ಆದರೆ ಗಮನಕ್ಕೆ ಬಾರದ ಸಂಗತಿಗಳಿಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಬರುವುದಿಲ್ಲ’ ಎಂದರು.
‘ಭ್ರಷ್ಟಾಚಾರ ಭಯೋತ್ಪಾದನೆಯಿದ್ದಂತೆ. ಅದನ್ನು ಹೊಡೆದೋಡಿಸಲು ಜನರೇ ಕೈ ಜೋಡಿಸಬೇಕು. ಬೇಗ ಕೆಲಸ ಮಾಡಿಸಿಕೊಳ್ಳಲು ದುಡ್ಡು ಕೊಡುವ ಬದಲು, ಕೆಲಸ ಆಗದಿದ್ದಲ್ಲಿ ಧರಣಿ ಮಾಡುವೆ ಎಂಬ ಹಟ ಜನರಲ್ಲಿ ಬೆಳೆದಾಗಲಷ್ಟೇ ಸಂಪೂರ್ಣ ಕಡಿವಾಣ ಸಾಧ್ಯ’ ಎಂದು ಅವರು ತಿಳಿಸಿದರು.