ವಿಜಯಪುರ: ತರಕಾರಿ ಮಾರಲು ಪೊಲೀಸರು ತಡೆಯೊಡ್ಡಿದ್ದರು ಎಂದು ಆರೋಪಿಸಿ ರಸ್ತೆ ಮೇಲೆ ಸೊಪ್ಪು ಎಸೆದು ಪ್ರತಿಭಟಿಸಿದ್ದ ಡೋಮನಾಳ ಗ್ರಾಮದ ರೈತ ಭೀಮನಗೌಡ ಬಿರಾದಾರಗೆ ತೋಟಗಾರಿಕೆ ಸಚಿವ ಮುನಿರತ್ನ ಸೋಮವಾರ ವಿಡಿಯೊ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.
‘ಸಚಿವರು ನನ್ನೊಂದಿಗೆ ಮಾತನಾಡಿ ವಿಷಾದಿಸಿದಿರು. ಸರ್ಕಾರ ರೈತರ ಪರವಾಗಿದೆ. ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿ, ಪರಿಹಾರವಾಗಿ ₹ 5 ಸಾವಿರವನ್ನು ಫೋನ್ ಪೇ ಮೂಲಕ ನೀಡಿದರು’ ಎಂದು ರೈತ ಬಿರಾದಾರ ಹೇಳಿದರು.
ಘಟನೆಯ ವಿವರ: ವಾರಾಂತ್ಯ ಕರ್ಫ್ಯೂ ನಡುವೆ ನಗರದ ಗೋದಾವರಿ ಹೋಟೆಲ್ ಬಳಿ ಭಾನುವಾರ ಸಂತೆಯಲ್ಲಿ ಕಡಿಮೆ ದರಕ್ಕೆ ಸೊಪ್ಪು ಮಾರುತ್ತಿದ್ದು, ಗ್ರಾಹಕರು ಗುಂಪುಗೂಡಿದ್ದರು.
ಜನರು ಗುಂಪುಗೂಡಿದ್ದನ್ನು ಕಂಡ ಪೊಲೀಸರು ಮಾರಾಟಕ್ಕೆ ತಡೆಯೊಡ್ಡಿದ್ದರು. ಇದರಿಂದ ರೈತ ಸೊಪ್ಪನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ.