ಸಿದ್ದನಾಥ ತಾಂಡಾದ ಅಕ್ಷಯ್ ಲಮಾಣಿ, ಪರಶುರಾಮ ಲಮಾಣಿ ಹಾಗೂ ರಮೇಶ ಲಮಾಣಿ ಮೂವರು ಮೀನುಗಾರರು ಮೀನು ಹಿಡಿಯಲು ಸಿದ್ದನಾಥ ಬಳಿಯ ಕೃಷ್ಣಾ ನದಿಯಲ್ಲಿ ಸುಮಾರು ಒಂದು ಕಿ.ಮೀನಷ್ಟು ದೂರ ತೆಪ್ಪದಲ್ಲಿ ತೆರಳಿದ್ದರು. ಸಂಜೆ ಮಳೆಗಾಳಿಗೆ ತೆಪ್ಪ ಮಗುಚಿದ ಪರಿಣಾಮ ಮೂವರ ಪೈಕಿ ಅಕ್ಷಯ್ ಈಜಿ ದಡ ಸೇರಿದ್ದು, ಪರಶುರಾಮ ಲಮಾಣಿ (36), ರಮೇಶ ಲಮಾಣಿ (38) ಇಬ್ಬರು ನಾಪತ್ತೆಯಾಗಿದ್ದರು. ಕೊಲ್ಹಾರ ತಾಲ್ಲೂಕಾಡಳಿತ ತಹಶೀಲ್ದಾರ್ ಎಂ.ಎ.ಎಸ್. ಬಾಗವಾನ ನೇತೃತ್ವದಲ್ಲಿ ಕೆಬಿಜೆಎನ್ಎಲ್ ರಕ್ಷಣಾ ತಂಡ, ಅಗ್ನಿಶಾಮಕ ದಳ, ಮೀನುಗಾರಿಕೆ ಇಲಾಖೆ, ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಶುಕ್ರವಾರ ಸಂಜೆವರೆಗೂ ಶೋಧ ಕಾರ್ಯ ನಡೆಸಿದರೂ ಮೀನುಗಾರರ ದೇಹಗಳು ಪತ್ತೆಯಾಗಿರಲಿಲ್ಲ.