ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ತನ್ನ ಊರಿಗೆ ಹೋಗಲು ತಡರಾತ್ರಿ ಬಸ್ಗಾಗಿ ಕಾಯುತ್ತಿದ್ದ ನರ್ಸ್ (22) ಒಬ್ಬರ ಮೇಲೆ ಮೂವರು ಕಾಮುಕರು ಅತ್ಯಾಚಾರ ಎಸಗಿದ್ದಾರೆ.
ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಜನವರಿ 17 ರಂದು ರಾತ್ರಿ 1ಗಂಟೆ ಸಮಯದಲ್ಲಿ ಬಸ್ಗಾಗಿ ಕಾಯುತ್ತಿದ್ದ ನರ್ಸ್ ಅವರ ಬಳಿಗೆ ಕಪ್ಪು ಬಣ್ಣದ ಬೈಕಿನಲ್ಲಿ ಬಂದ ಮೂವರು ಕಾಮುಕರು, ‘ಎಲ್ಲಿಗೆ ಹೋಗಬೇಕು’ ಎಂದು ವಿಚಾರಿಸಿದ್ದಾರೆ.
‘ಇಂಡಿಗೆ ಹೋಗಲು ಬಸ್ಗಾಗಿ ಕಾಯುತ್ತಿರುವೆ’ ಎಂದು ನರ್ಸ್ ಹೇಳಿದಾಗ, ‘ಇಂಡಿಗೆ ಹೋಗುವ ಬಸ್ ಇಲ್ಲಿ ಬರುವುದಿಲ್ಲ, ಸೆಟಲೈಟ್ ಬಸ್ ನಿಲ್ದಾಣಕ್ಕೆ ಬರುತ್ತವೆ, ಅಲ್ಲಿಗೆ ಬಿಡುತ್ತೇವೆ ಬಾ ತಂಗಿ’ ಎಂದು ಪುಸಲಾಯಿಸಿ ಬೈಕಿನಲ್ಲೇ ಕರೆದುಕೊಂಡು ಹೋಗಿದ್ದಾರೆ.
ಬಳಿಕ ಸೆಟಲೈಟ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ತರಕಾರಿ ಮಾರುಕಟ್ಟೆ ಬಳಿ ನಿರ್ಜನ ಪ್ರದೇಶಕ್ಕೆ ನರ್ಸ್ ಅನ್ನು ಕರೆದೊಯ್ದು, ಬಟ್ಟೆ ಬಿಚ್ಚಲು ಹೇಳಿದ್ದಾರೆ. ನರ್ಸ್ ವಿರೋಧ ವ್ಯಕ್ತಪಡಿಸಿದಾಗ ಹಲ್ಲೆ ಮಾಡಿದ್ದಾರೆ. ಅದರಲ್ಲಿ ಒಬ್ಬಾತ ಒಬ್ಬ ಅತ್ಯಾಚಾರ ಎಸಗಿದ್ದಾನೆ. ಇನ್ನುಳಿದ ಇಬ್ಬರು ಆತನಿಗೆ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯಿಂದ ಮೂರ್ಚೆ ಹೋಗಿ ಬಿದ್ದಿದ್ದ ಯುವತಿಯನ್ನು ಬೆಳಿಗ್ಗೆ ಮಾರುಕಟ್ಟೆಗೆ ಬಂದ ವ್ಯಾಪಾರಸ್ಥರು ನೋಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ನೊಂದ ಸಂತ್ರಸ್ತ ಯುವತಿ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ವಿಜಯಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಂಡನೆ:
ಅತ್ಯಾಚಾರ ಪ್ರಕರಣವನ್ನು ಶ್ರೀರಾಮಸೇನೆಯ ರಾಜ್ಯ ಮುಖಂಡ ನೀಲಕಂಠ ಕಂದಗಲ್ ತೀವ್ರವಾಗಿ ಖಂಡಿಸಿದ್ದಾರೆ. ‘ಪೈಶಾಚಿಕ ಕೃತ್ಯ ಎಸಗಿದ ಅತ್ಯಾಚಾರಿ ಕಾಮುಕರನ್ನು ಕೂಡಲೇ ಬಂಧಿಸಬೇಕು ಹಾಗೂ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು’ ಅವರು ಆಗ್ರಹಿಸಿದ್ದಾರೆ.