ವಿಜಯಪುರ: ಒಬ್ಬ ಕ್ರೂರ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿ ರಾಮಾಯಣ ಬರೆದು ಜಗತ್ ಪ್ರಸಿದ್ಧಿ ಗಳಿಸಿದ್ದು ಇತಿಹಾಸ ಎಂದು ಮಧ್ವಾಚಾರ್ಯ ಮೊಕಾಸಿ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ರಾಮಾಯಣ ಬರೆಯುವ ಮೊದಲು ಒಬ್ಬ ಕಠೋರ ವ್ಯಕ್ತಿಯಾಗಿದ್ದ. ಆದರೆ, ತದ ನಂತರ ಆತನಲ್ಲಿ ನಾರದ ಮುನಿಗಳಿಂದ ಜ್ಞಾನೋದಯವಾಗಿ ಅವನ ಜೀವನವೇ ಬದಲಾಗಿ ಹೋಯಿತು. ಆತ ಮಹಾನ್ ಕವಿಯಾಗಿ ಬದಲಾದ ಎಂದು ಹೇಳಿದರು.
ಪ್ರಭಾರ ಕುಲಪತಿ ಪ್ರೊ. ಓಂಕಾರ ಕಾಕಡೆ ಮಾತನಾಡಿ, ಮಹರ್ಷಿ ವಾಲ್ಮೀಕಿ ಮಹಾನ್ ವಿದ್ವಾಂಸ. ಅವರು ಬರೆದ ರಾಮಾಯಣ ವಿಶ್ವದ ಅನೇಕ ಭಾಷೆಗಳಿಗೆ ತರ್ಜುಮೆಯಾಗಿದೆ. ವಾಲ್ಮೀಕಿಯವರು ರಾಮಾಯಣವನ್ನು ಸಂಸ್ಕೃತದಲ್ಲಿ ಬರೆದಿದ್ದರು. ಆದರೆ, ಇಂದು ಅದು ಬಹುತೇಕ ಎಲ್ಲ ಭಾಷೆಗಳಲ್ಲಿಯೂ ಲಭ್ಯವಿದೆ ಎಂದರು.
ಮಹರ್ಷಿ ವಾಲ್ಮೀಕಿಯ ಮೂಲ ಹೆಸರು ರತ್ನಾಕರ. ಬಾಲ್ಯದಲ್ಲಿ ಅವರನ್ನು ಅಪಹರಿಸಲಾಗಿತ್ತು. ನಂತರ ಅವರು ಬಿಲ್ ಸಮಾಜದಲ್ಲಿ ಬೆಳೆದರು. ಆ ಸಮಯದಲ್ಲಿ ಬಿಲ್ ಸಮುದಾಯದವರು ಕಾಡಿನ ಜನರನ್ನು ಲೂಟಿ ಮಾಡುತ್ತಿದ್ದರು. ಬಿಲ್ ಸಮುದಾಯದಿಂದ ಪ್ರಭಾವೀತರಾದ ವಾಲ್ಮೀಕಿ ತಾವು ಕೂಡ ದರೋಡೆಯಂತಹ ಕಾರ್ಯಗಳಲ್ಲಿ ತೊಡಗಿಕೊಂಡಡಿದ್ದರು ಎಂದು ಹೇಳಿದರು.
ನಾರದ ಮುನಿಗಳ ಮಾತಿನಿಂದ ಪರೀಕ್ಷೆಗೆ ಒಳಪಟ್ಟು ತಮ್ಮನ್ನ ಬದಲಾಯಿಸಿಕೊಂಡ ವಾಲ್ಮೀಕಿ ಮಹಾನ್ ಕವಿಯಾಗಿ ಹೊರ ಹೊಮ್ಮಿದರು. ಜಗತ್ತೆ ಮೆಚ್ಚುವಂತೆ ತಮ್ಮ ಮಹಾಕಾವ್ಯವನ್ನು ಅವರು ರೂಪಿಸಿದ್ದಾರೆ. ಇಂದು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಪಿ.ಜಿ. ತಡಸದ, ಎಸ್.ಸಿ.ಎಸ್.ಟಿ ಸೆಲ್ನ ನಿರ್ದೇಶಕಿ ಅನಿತಾ ನಾಟಿಕಾರ, ಕಾರ್ಯಕ್ರಮ ಸಂಯೋಜಕ ಹನುಮಂತಯ್ಯ ಪೂಜಾರಿ, ಕ್ರೀಡಾ ವಿಭಾಗದ ನಿರ್ದೇಶಕಿ ಡಾ. ಜ್ಯೋತಿ ಉಪಾಧ್ಯೆಯ ಉಪಸ್ಥಿತರಿದ್ದರು.