ಇಂಡಿ: ಶಿಕ್ಷಕ ರಾಧಾಕೃಷ್ಣನ್ ಅವರನ್ನು ಈ ರಾಷ್ಟ್ರದ ರಾಷ್ಟ್ರಪತಿಯನ್ನಾಗಿ ಮಾಡಿದ ಪರಂಪರೆ ನಮ್ಮದು. ಶಿಕ್ಷಕ ರಾಷ್ಟ್ರ ನಿರ್ಮಾಪಕರು ಎಂಬ ಇತಿಹಾಸ ನಮ್ಮದು, ಗುರು ಪರಂಪರೆ, ಶಿಕ್ಷಕರನ್ನು ಗೌರವಿಸುವದು ನಮ್ಮ ಬಳುವಳಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಡಾ. ರಾಧಾಕೃಷ್ಣನ್ ಸಭಾಭವನದಲ್ಲಿ ನಡೆದ ರಾಧಾಕೃಷ್ಣನ್ ಜನ್ಮ ದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಉದ್ಘಾಟಿಸಿಅವರು ಮಾತನಾಡಿದರು.
ಗುರುವೆಂದರೆ ಮನಸ್ಸಿನ, ಬದುಕಿನ ಕತ್ತಲೆಯನ್ನು ಕಳೆದು ಜ್ಞಾನದತ್ತ ಕರೆದುಯ್ಯುವ ದಿವ್ಯ ಬೆಳಕು ಎಂದರು.
ತೋಂಟದಾರ್ಯ ಶಾಖಾ ಮಠ ಮುಂಡರಗಿ ಹಾಗೂ ಬೈಲೂರದ ನಿಜಗುಣ ಪ್ರಭು ಮಹಾಸ್ವಾಮಿ ಮಾತನಾಡಿ, ಜಗತ್ತನ್ನು ಬದಲಾಯಿಸಲು ಅತ್ಯಂತ ಶಕ್ತಿಶಾಲಿ ಆಯುಧ ಶಿಕ್ಷಣ. ಅದು ಶಿಕ್ಷಕನ ಕೈಯಲ್ಲಿದೆ. ತಾಯಿ, ಪ್ರಾಥಮಿಕ ಶಾಲಾ ಶಿಕ್ಷಕ ಮತ್ತು ಆಧ್ಯಾತ್ಮಿಕ ಗುರು ಇವರು ಮಾನವನ ಜೀವನದ ಬೆಳವಣೆಗೆಗೆ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ, ಎಸ್.ಆರ್.ನಡಗಡ್ಡಿ, ಪ್ರಕಾಶ ನಾಯಕ, ಪಿ.ಎ.ಎಲಿಗಾರ ಮಾತನಾಡಿದರು.
40 ಕ್ಕೂ ಹೆಚ್ಚು ಶಿಕ್ಷಕರನ್ನು ಮತ್ತು ಸೇನೆಯಿಂದ ನಿವೃತ್ತಿ ಹೊಂದಿದ ಬಂಡೆಪ್ಪ ಮಹಾದೇವ ವಠಾರ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಬ್ಬೀರ ಅಹಮ್ಮದ ಮಿರಜಕರ, ಬಿ.ಎಸ್.ಪಾಟೀಲ, ಸೀತಾ ಹಿಟ್ನಳ್ಳಿ, ಗೋಪಾಲ ಹಲಗೊಂಡ, ಚಂದ್ರಕಾಂತ ತಳವಾರ, ಎಸ್.ಬಿ.ತಲ್ಲೋಳ್ಳಿ, ಮಂಗಲಾ ಕಾಗವಾಡ ಇವರನ್ನು ಸನ್ಮಾನಿಸಲಾಯಿತು.
ನೌಕರರ ಸಂಘದ ಅಧ್ಯಕ್ಷ ಎಸ್.ಡಿ.ಪಾಟೀಲ, ಎಸ್.ಆರ್.ಪಾಟೀಲ, ಕಸಾಪ ಅಧ್ಯಕ್ಷ ಆರ್.ವಿ.ಪಾಟೀಲ, ಎಂ.ಎಚ್.ಬ್ಯಾಳಿ, ಸಂತೋಷ ಬಂಡೆ, ಸುಭದ್ರಾ ಗಿರಣಿವಡ್ಡರ ಇದ್ದರು.