ವಿಜಯಪುರ: ಕೇವಲ ಎಂಜಿನಿಯರಿಂಗ್-ಮೆಡಿಕಲ್ ಓದುವ ಕನಸು ಕಾಣದೆ, ಉತ್ತಮ ಆಡಳಿತಾಧಿಕಾರಿಗಳಾಗಿ, ಸೇನೆಗಳ ಮುಖ್ಯಸ್ಥರಾಗಿ ದೇಶ ಮುನ್ನೆಡೆಸುವ ವ್ಯಕ್ತಿಗಳಾಗಬೇಕು ಎಂದು ನೂತನ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.
ನಗರದ ಎಕ್ಸಲಂಟ್ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಶನಿವಾರ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಉತ್ತಮ ಶಿಕ್ಷಣ ನೀಡುತ್ತಿರುವ ಎಕ್ಸಲಂಟನಂತಹ ಸಂಸ್ಥೆಯಲ್ಲಿ ಕಲಿಯುತ್ತಿರುವ ತಾವು ಸಂಸ್ಥೆಯ, ಕಲಿಸಿದ ಗುರುಗಳ ಮತ್ತು ತಂದೆ-ತಾಯಿಯರಿಗೆ ಹೆಸರು ತರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಿ.ಇ.ಟಿ, ನೀಟ್, ಅಗ್ರಿ, ಐ.ಐ.ಟಿ ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಥಮ ರ್ಯಾಂಕ್ ಗಳಿಸಿರುವ ಸಂಸ್ಥೆಯ ಸಾಧನೆ ಕುರಿತು ಹಾಗೂಅತಿ ಕಡಿಮೆ ಅವಧಿಯಲ್ಲಿ ಸಂಸ್ಥೆ ಗಳಿಸಿದ ಸಾಧನೆಯನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ವಿವಿಧ ವಿಭಾಗಗಳು ಹಾಗೂ ಪ್ರಯೋಗಾಲಯಗಳಿಗೆ ಭೇಟಿ ನೀಡಿ ಪ್ರಯೋಗನಿರತ ಮಕ್ಕಳನ್ನು ಕಂಡು ಖುಷಿಪಟ್ಟರು. ನಂತರ ಅವರೊಂದಿಗೆ ಶೈಕ್ಷಣಿಕ ಸಂವಾದ ನಡೆಸಿದರು.
ಎಕ್ಸಲಂಟ್ ಸಂಸ್ಥೆಯ ಸಂಸ್ಥಾಪಕ ಬಸವರಾಜ ಕೌಲಗಿ ಮಾತನಾಡಿ, ಉತ್ತರ ಕರ್ನಾಟಕದ ಧೀಮಂತ ಪ್ರತಿಭೆಗೆ ಲೋಕಾಯುಕ್ತರ ಹುದ್ದೆ ಅರಿಸಿ ಬಂದಿದ್ದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.
ಸಮಾಜಮುಖಿ ಕಾರ್ಯಗಳಿಂದ ಮನೆಮಾತಾಗಿರುವ ಲೋಕಾಯುಕ್ತರು ತಮ್ಮ ಆದರ್ಶಮಯ ವ್ಯಕ್ತಿತ್ವದಿಂದ ನಾಡಿನ ಜನತೆಯ ಮೆಚ್ಚುಗೆ ಗಳಿಸಿದ್ದಾರೆ. ಅವರ ನಡೆ-ನುಡಿ-ಸರಳ ವ್ಯಕ್ತಿತ್ವ-ಸಜ್ಜನಿಕೆ ನಮಗೆಲ್ಲರಿಗೂ ಆದರ್ಶ. ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವ ಅವರು ಈಗ ಭ್ರಷ್ಟಾಚಾರ ನಿರ್ಮೂಲನೆಯ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಆ ಮೂಲಕ ಉತ್ತರ ಕರ್ನಾಟಕದ ಕೀರ್ತಿ ಹರಡಲಿ ಎಂದು ಶುಭ ಕೋರಿದರು.
ಶಿವಾನಂದ ಕಲ್ಯಾಣಿಯವರು ಲೋಕಾಯುಕ್ತರನ್ನು ಸ್ವಾಗತಿಸಿದರು. ಸಂಸ್ಥೆಯ ಪರವಾಗಿ ಶಾಲು ಹೊದಿಸಿ ಫಲ-ಪುಷ್ಪ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಗೌರವ ಸದಸ್ಯ ರಾಜಶೇಖರ ಕೌಲಗಿ, ನಿರ್ದೇಶಕ ಮಂಜುನಾಥ ಕೌಲಗಿ, ಪ್ರಾಚಾರ್ಯ ಡಿ.ಎಲ್ ಬನಸೋಡೆ, ಪರಶುರಾಮ ಭಾವಿಕಟ್ಟಿ, ಮಂಜುನಾಥ ಬಾಲಗಾಂವ ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಇದ್ದರು.