ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಮಧ್ಯಾಹ್ನ ಒಂದು ತಾಸು ಮುಂಗಾರು ಮಳೆಯ ಗುಡುಗು, ಸಿಡಿಲಿನೊಂದಿಗೆ ಅಬ್ಬರಿಸಿ ಸುರಿದಿದೆ.
ವಿಜಯಪುರ ನಗರ, ಕಲಕೇರಿ, ತಾಳಿಕೋಟೆ, ಹೊರ್ತಿ, ದೇವರ ಹಿಪ್ಪರಗಿ, ಸಿಂದಗಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದಿದೆ. ಮಳೆಯ ಆರ್ಭಟಕ್ಕೆ ಚರಂಡಿಗಳು ಉಕ್ಕಿ ರಸ್ತೆ ಮೇಲೆ ನೀರು ಹಳ್ಳವಾಗಿ ಹರಿಯಿತು. ವಾಹನ ಸಂಚಾರಕ್ಕೂ ಅಡಚಣೆಯಾಯಿತು.
ನಗರದಲ್ಲಿ ಮಳೆ ನೀರಿನೊಂದಿಗೆ ಚರಂಡಿ ಮತ್ತು ರಸ್ತೆ ಮೇಲಿನ ಹೊಲಸು ಸಹ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಳಿಸಿತು.
ಗ್ರಾಮೀಣ ಪ್ರದೇಶದಲ್ಲಿ ಹೊಲ, ತೋಟಗಳಲ್ಲಿ ನೀರು ನಿಂತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಗಾಳಿ, ಮಳೆಗೆ ಕೆಲವೆಡೆ ಗಿಡ, ಮರಗಳ ಕೊಂಬೆಗಳು ಮುರಿದು ನೆಲಕ್ಕುರುಳಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಜಿಲ್ಲೆಗೆ ಅಡಿ ಇಡುವಾಗಲೇ ಮುಂಗಾರು ಮಳೆ ಧಾರಾಕಾರವಾಗಿ ಸುರಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ.