ಇಂಡಿ: ಅಕ್ರಮ ದಾಸ್ತಾನು ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ರೈತರು, ನಕಲಿ ರಸಗೊಬ್ಬರ ದಾಸ್ತಾನು ಮಳಿಗೆ ಮೇಲೆ ತಾವೇ ದಾಳಿ ಮಾಡಿದ ಘಟನೆ ಇಂಡಿ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗೊಬ್ಬರ ಮಾರಾಟ ಪರವಾನಗಿ ಪಡೆದಿದ್ದ ವ್ಯಕ್ತಿ ನಕಲಿ ಗೊಬ್ಬರ ದಾಸ್ತಾನು ಮಾಡಿದ್ದ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ರೈತರು ದಾಳಿ ನಡೆಸಿ, ನಂತರ ಕೃಷಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ನಕಲಿ ಗೊಬ್ಬರ ವಶಕ್ಕೆ ಪಡೆದ ಅಧಿಕಾರಿಗಳು, ಪರವಾನಗಿ ರದ್ದುಪಡಿಸುವ ಭರವಸೆನೀಡಿದ್ದಾರೆ.
‘ನಕಲಿ ಗೊಬ್ಬರ ಅಡ್ಡೆಗಳ ಮೇಲೆ ದಾಳಿ ಮಾಡಿ ಪರವಾನಗಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ತಾಲ್ಲೂಕು ಆಡಳಿತದ ವಿರುದ್ಧ ಹೋರಾಟ ಮಾಡಲಾಗುವುದು’ ಎಂದು ರೈತ ಮುಖಂಡ ಗುರಪ್ಪ ಅಗಸರ ಎಚ್ಚರಿಕೆ ನೀಡಿದ್ದಾರೆ.