ವಿಜಯಪುರ: ಸಾರಿಗೆ ಇಲಾಖೆಯು ನೌಕರರೊಂದಿಗೆ 2020ರ ಜನವರಿ 1ರಂದು ಮಾಡಿಕೊಂಡಿರುವ ವೇತನ ಒಪ್ಪಂದವನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ಎಐಟಿಯುಸಿ ಸಂಯೋಜಿತ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಆಗ್ರಹಿಸಿದೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಡಿ.ಎ., ಸಾರಿಗೆ ನೌಕರರ ಮುಷ್ಕರದ ಸಂದರ್ಭದಲ್ಲಿ ನೌಕರರ ವಿರುದ್ಧ ಮಾಡಿರುವ ವರ್ಗಾವಣೆಗಳನ್ನು ಮತ್ತು ಎಲ್ಲ ಶಿಸ್ತಿನ ಕ್ರಮಗಳನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
2005ರ ಐತೀರ್ಪು ಜಾರಿ ಮಾಡಬೇಕು ಹಾಗೂ ನಾಲ್ಕೂ ನಿಗಮಗಳನ್ನು ಒಂದುಗೂಡಿಸಬೇಕು ಹಾಗೂ ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿ ಇತ್ಯರ್ಥಪಡಿಸಲು ಮುಖ್ಯಮಂತ್ರಿಯವರು ಸಮಯ ಕೊಡಬೇಕು ಎಂದು ಮನವಿ ಮಾಡಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ವಿವಿಧ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬಬೇಂದ್ರೆ ಸಾರಿಗೆ ಸಂಸ್ಥೆಯ ಬೇಡಿಕೆಗೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿದ್ದು ಅವುಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಪರವಾದ 44 ಕಾನೂನುಗಳನ್ನುಕಾರ್ಪೊರೇಟ್ ಉದ್ಯಮಿಗಳ ಒತ್ತಡಕ್ಕೆ ಮಣಿದು ನಾಲ್ಕು ಸಂಹಿಂತೆಗಳನ್ನಾಗಿ ಮಾರ್ಪಡಿಸಿದ್ದು, ಕಾರ್ಮಿಕರ ಮೂಲಭೂತ ಹಕ್ಕಾದ ಮುಷ್ಕರ, ಕೆಲಸದ ನಿರಾಕರಣೆಯ ಹಕ್ಕನ್ನು ಕಸಿದುಗೊಳ್ಳಲಾಗುತ್ತಿದ್ದು, ಇವುಗಳನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಮುಖಂಡರಾದ ಸಿದ್ದಪ್ಪ ಪಾಲಿಕೆ, ಐ.ಐ.ಮುಶ್ರೀಫ್, ಶಿವಾಜಿ ರಜಪೂತ, ಎ.ಎಸ್.ದಿವಾಣದಿ, ರಫೀಕ್ ನದಾಫ್, ಎಂ.ಎಚ್.ಮಾರನಬಸರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.