ವಿಜಯಪುರ: ತಳವಾರ ಮತ್ತು ಪರಿವಾರ ಸಮಾಜದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡದಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಂಗಳವಾರ ಧರಣಿ ನಡೆಸಲಾಯಿತು.
ಎಲ್ಲಿಯವರೆಗೆ ತಳವಾರ ಮತ್ತು ಪರಿವಾರ ಸಮಾಜದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವುದಿಲ್ಲವೋ ಅಲ್ಲಿಯವರೆಗೆ ನಿರಂತರವಾಗಿ ಧರಣಿ ನಡೆಯಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಮುಖಂಡ ಶರಣಪ್ಪ ಸುಣಗಾರ ಮಾತನಾಡಿ,ತಳವಾರ ಮತ್ತು ಪರಿವಾರ ಸಮಾಜದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದರೂ ರಾಜ್ಯ ಸರ್ಕಾರ ಜಾತಿ ಪ್ರಮಾಣ ಪತ್ರವನ್ನು ಕೊಡುವಂತೆ ಸ್ಪಷ್ಟ ನಿರ್ದೇಶನ ನೀಡದಿರುವುದು ಖಂಡನೀಯ ಎಂದರು.
ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರವನ್ನು ನೀಡಲು ಸರ್ಕಾರ ನಿರ್ದೇಶನ ನೀಡಬೇಕು, ಇಲ್ಲವಾದರೆ ಮುಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅದ್ಯಕ್ಷ ಹಾಸಿಂಪೀರ ವಾಲಿಕಾರ, ಬಿ.ಜೆ.ಪಿ ಮುಖಂಡರಾದ ಉಮೇಶ ವಂದಾಲ, ಶಿವಾನಂದ ಬುಯ್ಯಾರ, ರಮೇಶ ನಾಯಕ, ಬಸವರಾಜ ಕೋಕಟನೂರ, ಗೊಲ್ಲಾಳಪ್ಪ ಪಾಟೀಲ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆ: ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡದಿರುವುದನ್ನು ಖಂಡಿಸಿಬಬಲೇಶ್ವರ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಳವಾರ ಸಮುದಾಯದಿಂದ ಪ್ರತಿಭಟನೆ ನಡೆಸಲಾಯಿತು.
ತಳವಾರ,ಪರಿವಾರ ಪರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಅಮೋಘಿ ವಾಲಿಕಾರ, ಪ್ರಕಾಶ ಸೊನ್ನದ, ನಾಗು ಹೊಳೆಪ್ಪಗೋಳ, ಸಿ.ಎಚ್.ಚಿಕ್ಕಲಕಿ, ಬಾಬುರಾವ್ ಕೋಲಕಾರ್, ಸದಾಶಿವ ಕೋಲಕಾರ, ಯಲ್ಲಪ್ಪ ಕೋಲಕಾರ, ಸಂಗಮೇಶ ಕೋಲಕಾರ ಉಪಸ್ಥಿತರಿದ್ದರು.