ವಿಜಯಪುರ: ಒಳಮೀಸಲಾತಿಗೆ ಸಂಬಂಧಿಸಿದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಗೆ ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾರ್ಕಿಕ ಅಂತ್ಯ ಸಿಗಲಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿ ಜಾರಿಯಾಗಲೇಬೇಕು. ಈ ಸಂಬಂಧ ಮುಂದಿನ ಅಧಿವೇಶನದಲ್ಲಿ ಚರ್ಚೆ ಆಗಬೇಕಾಗಿದೆ ಎಂದರು.
ಎಸ್ಸಿ, ಎಸ್ಟಿ ಮೀಸಲಾತಿ ಪಟ್ಟಿಗೆ ಹೊಸದಾಗಿ ಮತ್ತಷ್ಟು ಸಮುದಾಯವನ್ನು ಸೇರ್ಪಡೆ ಮಾಡುವ ಮುನ್ನಾ ಈಗಿರುವ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಇಲ್ಲವಾದರೆ, ಸರ್ಕಾರ ಹೊಸ ಸಮುದಾಯಗಳನ್ನು ಎಸ್ಸಿ, ಎಸ್ಟಿಗೆ ಸೇರ್ಪಡೆ ಪ್ರಸ್ತಾವವನ್ನೇ ಕೈಬಿಡಬೇಕು ಎಂದು ಹೇಳಿದರು.
ಬಿಜೆಪಿ ದಲಿತ, ಅಲ್ಪ ಸಂಖ್ಯಾತ ವಿರೋಧಿ, ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ. ಮೀಸಲಾತಿ ಹಿಂಪಡೆಯುತ್ತಾರೆ ಎಂದು ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಇದುವರೆಗೆ ಬಿಂಬಿಸುವ ಮೂಲಕ ದಲಿತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾ ಬಂದಿದ್ದವು. ಆದರೆ, ಇದೀಗ ಬಿಜೆಪಿ ದಲಿತ ವಿರೋಧಿಯಲ್ಲ ಎಂಬುದು ಎಲ್ಲರಿಗೂ ಅರಿವಾಗಿದೆ. ಪರಿಣಾಮ ಎಲ್ಲ ಚುನಾವಣೆಗಳಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ಸಿಗುತ್ತಿದೆ ಎಂದು ಹೇಳಿದರು.
ದಲಿತರು ಬಿಜೆಪಿ ಪರವಾಗಿ ನಿಂತ ಪರಿಣಾಮ ಪಕ್ಷದ ಶಕ್ತಿ ಹೆಚ್ಚಿದೆ. ಇತ್ತೀಚೆಗೆ ನಡೆದ ಶಿರಾ ಉಪ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಹಾಗೂ ಕಳೆದ ಸಂಸತ್ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಲು ದಲಿತರು ಕಾರಣ ಎಂದು ಹೇಳಿದರು.
ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡುವ ಮೂಲಕ ದಲಿತರಿಗೆ ಉನ್ನತ ಸ್ಥಾನವನ್ನು ಬಿಜೆಪಿ ನೀಡಿದೆ. ಭವಿಷ್ಯದಲ್ಲಿ ದಲಿತ ನಾಯಕರು ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶಗಳು ಇವೆ ಎಂದರು.
ದೇಶದಲ್ಲಿ ರಾಜಕೀಯವಾಗಿ ಬಿಜೆಪಿಗೆ ಪರ್ಯಾಯ ಶಕ್ತಿಗಳೇ ಇಲ್ಲವಾಗಿವೆ. ಕಾಂಗ್ರೆಸ್ ಮುಖಂಡರೇ ಕಾಂಗ್ರೆಸ್ ಅನ್ನು ಹೆಚ್ಚು ವಿರೋಧಿಸುವ ದಿನಗಳು ಬಂದೊದಗಿವೆ ಎಂದು ಹೇಳಿದರು.
ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಈಶಪ್ಪ ಹಿರೇಮನಿ, ರಾಜ್ಯ ಪ್ರಧನ ಕಾರ್ಯದರ್ಶಿ ದಿನಕರ ಬಾಬು, ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ ಘಟಕಾಂಬಳೆ, ಮುಖಂಡರಾದ ಶ್ರೀನಿವಾಸ ಕಂದಗಲ್, ಮುತ್ತಣ್ಣ ಸಾಸನೂರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
* ನ.26ರಂದು ರಾಜ್ಯ ಬಿಜೆಪಿ ವತಿಯಿಂದ 310 ಮಂಡಲಗಳಲ್ಲಿ ಸಂವಿಧಾನ ದಿನ ಆಚರಿಸಲಾಗುವುದು –ಚಲವಾದಿ ನಾರಾಯಣಸ್ವಾಮಿ, ಅಧ್ಯಕ್ಷ, ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ