ವಿಜಯಪುರ:ಕ್ಯಾನ್ಸರ್ ಪೀಡಿತ ಮುಸ್ಲಿಂ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ₹ 1 ಲಕ್ಷಸಹಾಯಧನ ಯೋಜನೆ ಹಿಂಪಡೆದು, ಎಲ್ಲ ಜಾತಿ, ಜನಾಂಗ, ಧರ್ಮದವರಿಗೆ ಈ ಯೋಜನೆಯನ್ನು ಜಾರಿಗೆ ತರಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಪತ್ರ ಬರೆದಿರುವ ಅವರು,ನಮ್ಮ ಬಿ.ಜೆ.ಪಿ ಸರ್ಕಾರ ಈ ರೀತಿಯ ಮುಸ್ಲಿಂ ತುಷ್ಟೀಕರಣ, ತಾರತಮ್ಯ ಮಾಡುವುದು ಸರಿಯಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಕ್ಯಾನ್ಸರ್ ಎಂಬುದು ಯಾವುದೇ ಜಾತಿ ನೋಡಿ ಬರುವುದಿಲ್ಲ. ಇದು ಎಲ್ಲ ಬಡ ಜಾತಿ, ಜನಾಂಗ, ಧರ್ಮದವರಿಗೂ ಬರುತ್ತದೆ. ಇದರಿಂದ ಬಿ.ಪಿ.ಎಲ್ ಕಾರ್ಡ್ ಹೊಂದಿದ ಬಡ ಜನರಿಗೆ ಸರ್ಕಾರದ ಸೌಲಭ್ಯ ದೊರಕಿಸಿ ಕೊಡಬೇಕು ಎಂದಿದ್ದಾರೆ.
ರಾಜ್ಯ ಸರ್ಕಾರ ತಕ್ಷಣ ಈ ತಾರತಮ್ಯವನ್ನು ಬದಲಾಯಿಸಬೇಕು.ಕ್ಯಾನ್ಸರ್ ಪೀಡಿತ ಪ್ರತಿಯೊಬ್ಬ ಪ್ರಜೆಗೂ ಇದರ ಲಾಭ ಲಭಿಸಬೇಕೇ ಹೊರತು, ಕೇವಲ ಮುಸ್ಲಿಮರಿಗಲ್ಲ. ಇಲ್ಲದಿದ್ದರೆ ನಮ್ಮ ಸರ್ಕಾರಕ್ಕೂ ಇತರೇ ಪಕ್ಷಗಳ ಸರ್ಕಾರಕ್ಕೂ ವ್ಯತ್ಯಾಸವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.