ವಿಜಯಪುರ:ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿ ಝೋನ್ 5ರಲ್ಲಿ ಕೈಗೊಂಡಿರುವ 24X7 ನೀರು ಪೂರೈಕೆ ಕಾಮಗಾರಿ ಪೂರ್ಣಗೊಂಡಿದ್ದು, ಅ.31ರಿಂದ ಪ್ರಾಯೋಗಿಕವಾಗಿ ನೀರು ಪೂರೈಕೆ ಆರಂಭಿಸಲಾಗುವುದು ಎಂದುಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹೇಳಿದರು.
ಸ್ಥಳಕ್ಕೆ ಶುಕ್ರವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
ಝೋನ್ 5ರ ವ್ಯಾಪ್ತಿಯ 3468 ಮನೆಗಳಿಗೆ ನಿರಂತರ ನೀರು ಪೂರೈಕೆಯಾಗಲಿದೆ ಎಂದು ತಿಳಿಸಿದರು.
ಕೇಂದ್ರದ ಅಮೃತ್ ಯೋಜನೆಯ ಹೆಚ್ಚುವರಿ ಅನುದಾನದಲ್ಲಿ ₹21.98 ಕೋಟಿ ವೆಚ್ಚದಲ್ಲಿ ವಿಜಯಪುರ ನಗರದಲ್ಲಿ 2 ಝೋನ್ಗಳಿಗೆ ನಿರಂತರ ನೀರು ಪೂರೈಕೆ ಹಾಗೂ ಇತರ ನೀರು ಸಂಗ್ರಹ ಹಾಗೂ ವಿತರಣಾ ಘಟಕಗಳು ಪೂರ್ಣಗೊಳ್ಳುವ ಹಂತದಲ್ಲಿವೆ ಎಂದರು.
ನಗರೋತ್ಥಾನ ಹಂತ-3ರಲ್ಲಿ ₹15 ಕೋಟಿ ವೆಚ್ಚದಲ್ಲಿ ನಗರದ ಭೂತನಾಳ ಕೆರೆಯ ಆವರಣದಲ್ಲಿ 10 ಎಂ.ಎಲ್.ಡಿ ಸಾಮರ್ಥ್ಯದ ಜಲ ಶುದ್ಧೀಕರಣ ಘಟಕವು ಮುಕ್ತಾಯ ಹಂತದಲ್ಲಿದ್ದು, ಈ ಘಟಕವನ್ನು ನ. 15ರಂದು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ ಎಂದರು.
ಈ ಎರಡು ಯೋಜನೆಗಳು ಚಾಲನೆಗೊಂಡ ನಂತರ ನಗರದ 1ರಿಂದ5 ಹಾಗೂ 22ನೇ ಝೋನ್ಗಳ ಒಟ್ಟು ಸುಮಾರು 16 ಸಾವಿರ ಮನೆಗಳಿಗೆ 24X7ನೀರು ಪೂರೈಕೆಯಾಗಲಿದೆ ಎಂದು ಹೇಳಿದರು.
ನಗರದಲ್ಲಿ ಕೇಂದ್ರದ ಅಮೃತ್ ಯೋಜನೆಯ ಅಡಿಯಲ್ಲಿ 24X7 ನೀರು ಪೂರೈಕೆ ಬಾಕಿ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ನಗರದ ಎಲ್ಲ ವಾರ್ಡ್ಗಳಿಗೆ ನಿರಂತರ ನೀರು ಪೂರೈಕೆ ಮಾಡಲು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಇಟಗಿ ಪೆಟ್ರೋಲ್ ಪಂಪ್ನಿಂದ ತೊರವಿ, ಬಬಲೇಶ್ವರ ನಾಕಾ ಮತ್ತು ಕಾಮತ್ ಹೋಟೆಲ್ ಎದುರಿನ ರಸ್ತೆಗಳ ದುರಸ್ತಿ ಕಾಮಗಾರಿಯನ್ನೂ ಜಿಲ್ಲಾಧಿಕಾರಿ ಪರಿಶೀಲಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ, ಕರ್ನಾಟಕ ನಗರ ನೀರು ಸರಭರಾಜು ಹಾಗೂ ಒಳ ಚರಂಡಿ ಮಂಡಳಿ ವಿಭಾಗದ ಅಧಿಕಾರಿಗಳು ಇದ್ದರು.