ವಿಜಯಪುರ: ನಗರದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದು, ಅವರಿಂದ 3 ನಾಡ ಪಿಸ್ತೂಲ್ ಹಾಗೂ 4 ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಪ್ರದೇಶದಿಂದ ನಾಡ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಅಕ್ರಮವಾಗಿ ತಂದು ಇಟ್ಟುಕೊಂಡಿದ್ದ ಕಿರಣ್ ರಮೇಶ್ ರೂಗಿ, ಕಿರಣ್ ದಾನಪ್ಪ ಗಾಯಕವಾಡ ಎಂಬುವವರನ್ನು ಬಂಧಿಸಲಾಗಿದೆ ಎಂದರು.
ನಗರದ ಜಮಖಂಡಿ ರಸ್ತೆಯಲ್ಲಿ ಅನುಮಾನಾಸ್ಪದವಾದ ರೀತಿಯಲ್ಲಿ ಕಿರಣ ರೋಗಿ ಓಡಾಟ ಮಾಡುತ್ತಿದ್ದ ವೇಳೆಯಲ್ಲಿ ಗಾಂಧಿ ಚೌಕ್ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ, ಪರಿಶೀಲಿಸಿದಾಗ ಮಧ್ಯಪ್ರದೇಶದಿಂದ 3 ಪಿಸ್ತೂಲ್ ಹಾಗೂ 4 ಜೀವಂತ ಗುಂಡುಗಳನ್ನು ಮಾರಾಟಕ್ಕೆ ತಂದಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದರು.
ಇಬ್ಬರು ಬಂಧನ:
ಮತ್ತೊಂದು ಪ್ರಕರಣದಲ್ಲಿ ಪಿಸ್ತೂಲ್ ಮತ್ತು ಜೀವಂತ ಗುಂಡು ಹೊಂದಿದ್ದ ಇಬ್ಬರನ್ನು ಆದರ್ಶನಗರ ಪೊಲೀಸರು ಬಂಧಿಸಿದ್ದಾರೆ. ಸುರೇಶ ರಾಠೋಡ, ವಿಜಯ ಅಲಿಯಾಸ್ ಪಿಂಟೂ ಲಕ್ಷ್ಮಣ ರಾಠೋಡ ಬಂಧಿತ ಆರೋಪಿಗಳು.
ಈ ಇಬ್ಬರು ಆರೋಪಿಗಳಿಂದ ಒಂದು ನಾಡ ಬಂದೂಕು, ಒಂದು ಜೀವಂತ ಗುಂಡು, ಒಂದು ಕಾರು, ಒಂದು ಲಾಂಗ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಬಂಧಿಸಿದ ಗಾಂಧಿಚೌಕ್, ಆದರ್ಶನಗರ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಅರಸಿದ್ದಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.