ವಿಜಯಪುರ: ನಗರದ ಅಲ್ ಅಮಿನ್ ಮೆಡಿಕಲ್ ಕಾಲೇಜಿನ ಎದುರುಗಡೆ ಇರುವ ಡಿ.ಡಿ.ಯು.ಜಿ.ಕೆ.ವೈ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ನೀಡಬೇಕಾದ ಮೂಲಸೌಕರ್ಯದಲ್ಲಿ ನಡೆದಿರುವ ಅಕ್ರಮವನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಎಬಿವಿಪಿಯಿಂದ ಪ್ರತಿಭಟನೆ ನಡೆಸಲಾಯಿತು.
ಎಬಿವಿಪಿ ಜಿಲ್ಲಾ ಸಂಚಾಲಕ ಬಸವರಾಜ ಪೂಜಾರಿ ಮಾತನಾಡಿ, ತರಬೇತಿ ಕೇಂದ್ರದಲ್ಲಿ ಗ್ರಾಮೀಣ ಮಟ್ಟದಿಂದ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಹಾಗೂ ಜೀವನೋಪಾಯಕ್ಕೆ ಬೇಕಾದ ಎಲ್ಲಾ ರೀತೀಯ ಕೌಶಲವನ್ನು ಈ ತರಬೇತಿ ಕೇಂದದಲ್ಲ್ರಿ ಸಿಗುತ್ತೆ ಎನ್ನುವ ಭರವಸೆಯಿಂದ ಬರುತ್ತಾರೆ. ಆದರೆ, ದುರ್ದೈವ ಅದಕ್ಕೆ ಪೂರಕವಾದ ಯಾವುದೆ ರೀತಿಯ ಸೌಲಭ್ಯಗಳು ಇಲ್ಲಿ ಸಿಗದಿರುವುದು ನಾಚಿಕೆ ಸಂಗತಿ ಎಂದರು.
ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಾದ ರುದ್ರಪ್ಪ ಪಾಟೀಲ್ ಹಾಗೂ ಗೌತಮಿ ಕೋರೆ ಮಾತನಾಡಿ, ಅನೇಕ ತಿಂಗಳಿಂದ ನಮಗೆ ವಸತಿ ನಿಲಯ ಪಾಲಕರಿಲ್ಲ, ಗುಣಮಟ್ಟದ ಊಟದ ವ್ಯವಸ್ಥೆ ಇಲ್ಲ ಹಾಗೂ ಸರ್ಕಾರದಿಂದ ನಮಗೆ ಸಿಗಬೇಕಾದ ಮೂಲಸೌಕರ್ಯಗಳು ದೊರೆಯುತ್ತಿಲ್ಲ, ಜೊತೆಗೆ ಕೆಲ ವಿಷಯಗಳ ಬೋಧನಾ ಸಿಬ್ಬಂದಿ ಇಲ್ಲ ಎಂದು ದೂರಿದರು.
ತರಬೇತಿ ಕೇಂದ್ರ ನಡೆಸುವ ಗುತ್ತಿಗೆದಾರ ಸರ್ಕಾರದಿಂದ ಸಂಸ್ಥೆಗೆ ಬಂದಂತಹ ₹ 17 ಲಕ್ಷವನ್ನು ಕೊಳ್ಳೆ ಹೊಡೆದು, ಕಟ್ಟಡಕ್ಕೆ ಬಾಡಿಗೆ ಕಟ್ಟದೆ ದ್ರೋಹ ಬಗೆದಿದ್ದಾರೆ ಹಾಗೂ ಕಟ್ಟಡದ ಬಾಡಿಗೆ ಕಟ್ಟದಿರುವ ಕಾರಣ ಕಟ್ಟಡದ ಮಾಲೀಕ ಒಂದು ದಿನದಲ್ಲಿ ಎಲ್ಲ ವಿದ್ಯಾರ್ಥಿಗಳು ಹೊರಹೋಗಬೇಕೆಂದು ಹೇಳಿದ್ದಾರೆ ಎಂದರು.
ಎಬಿವಿಪಿ ನಗರ ಕಾರ್ಯದರ್ಶಿ ಸಿದ್ದು ಪತ್ತಾರ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಯನ್ನು ಅರಿತು ಕೂಡಲೇ ಸರ್ಕಾರ ವಿದ್ಯಾರ್ಥಿಗಳಿಗೆ ದಾರಿತೋರಬೇಕು. ಇಲ್ಲವಾದಲ್ಲಿ ಎಬಿವಿಪಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಬಿವಿಪಿ ತಾಲ್ಲೂಕು ಸಂಚಾಲಕ ಅಕ್ಷಯ ಯಾದವಾಡ, ನಗರ ಸಂಘಟನಾ ಕಾರ್ಯದರ್ಶಿ ನಾಗರಾಜ ಬಟಗೇರಾ, ನಗರ ಸಹಕಾರ್ಯದರ್ಶಿ ಸಿದ್ದು ಉಪ್ಪಾರ, ಮಂಜುನಾಥ ಹಳ್ಳಿ, ಪ್ರಮುಖರಾದ ವಿನೋದ ಮನ್ನೊಡ್ಡರ್, ಬಾಲಾಜಿ ಇದ್ದರು.