ವಿಜಯಪುರ:ಜಿಲ್ಲೆಯ 31 ಸರ್ಕಾರಿ, 56 ಅನುದಾನಿತ ಮತ್ತು 127 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿಗೆ 2020–21ನೇ ಸಾಲಿಗೆ ದಾಖಲಾಗಿದ್ದ 27,037 ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾಗಿದ್ದಾರೆ.
ಕೋವಿಡ್ ಭಯ ಇರುವುದರಿಂದ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಲಾಗಿತ್ತು. ವಿದ್ಯಾರ್ಥಿಗಳು ಯಾವುದೇ ಪರೀಕ್ಷೆ ಬರೆದಿಲ್ಲ.ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕದಲ್ಲಿ ಶೇ 45, ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳಲ್ಲಿ ಶೇ 45 ಹಾಗೂ ದ್ವಿತೀಯ ಪಿಯುಸಿಯ ಶೇ 10ರಷ್ಟು ಶೈಕ್ಷಣಿಕ ಚಟುವಟಿಕೆ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಎ.ಜಹಗೀರದಾರ ತಿಳಿಸಿದ್ದಾರೆ.
15,633 ಬಾಲಕರು, 11,404 ಬಾಲಕಿಯರು ಸೇರಿದಂತೆ 27,037 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 100ರಷ್ಟು ಫಲಿತಾಂಶ ಲಭ್ಯವಾಗಿದೆ ಎಂದುಹೇಳಿದರು.
ಕಲಾವಿಭಾಗ: 8851 ಬಾಲಕರು, 5381 ಬಾಲಕಿಯರು ಸೇರಿದಂತೆ ಒಟ್ಟು 14,232 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗ: 2184 ಬಾಲಕರು, 2103 ಬಾಲಕಿಯರು ಸೇರಿದಂತೆ ಒಟ್ಟು 4287 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ವಿಜ್ಞಾನ: 4598 ಬಾಲಕರು, 3920 ಬಾಲಕಿಯರು ಸೇರಿದಂತೆ ಒಟ್ಟು 8518 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಗ್ರಾಮೀಣ ಭಾಗದ 6262 ಬಾಲಕರು, 4445 ಬಾಲಕಿಯರು ಸೇರಿದಂತೆ 10,707 ವಿದ್ಯಾರ್ಥಿಗಳು ಹಾಗೂ ನಗರ–ಪಟ್ಟಣದ ಪ್ರದೇಶದ 9371 ಬಾಲಕರು, 6959 ಬಾಲಕಿಯರು ಸೇರಿದಂತೆ ಒಟ್ಟು 16,330 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
***
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯದೇ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ಇನ್ನಷ್ಟು ಕಠಿಣ ಅಭ್ಯಾಸ ಮಾಡಿ ಯಶಸ್ಸು ಗಳಿಸಲು ಆದ್ಯತೆ ನೀಡಬೇಕು. –ಆರ್.ಎ.ಜಹಗೀರದಾರ,ಉಪ ನಿರ್ದೇಶಕ ಪದವಿ ಪೂರ್ವ ಶಿಕ್ಷಣ ಇಲಾಖೆ, ವಿಜಯಪುರ