ಮುದ್ದೇಬಿಹಾಳ: ಹಿಂದೂ ಧರ್ಮದ ಅವಹೇಳನ ಸಲ್ಲದು. ಹಿಂದೂ ಸಮಾಜ ಒಂದಾಗಿ ದೇಶ, ಧರ್ಮದ ವಿರುದ್ಧ ಮಾತನಾಡುವ ಎಡಪಂಥಿಯವರಿಗೆ ತಕ್ಕ ಉತ್ತರ ನೀಡಬೇಕು ಎಂದು ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಪರಶುರಾಮ ಪವಾರ ಹೇಳಿದರು.
ಪಟ್ಟಣಕ್ಕೆ ಭಾನುವಾರ ಆಗಮಿಸಿದ ವಿಶ್ವ ಹಿಂದೂ ಪರಿಷತ್ತ್ ವತಿಯಿಂದ ಹಮ್ಮಿಕೊಂಡಿದ್ದ ಶೌರ್ಯ ಜಾಗಾರಣಾ ರಥಯಾತ್ರೆಯನ್ನು ಬಸವೇಶ್ವರ ವೃತ್ತದಲ್ಲಿ ಸ್ವಾಗತಿಸಿಕೊಂಡು ಅವರು ಮಾತನಾಡಿದರು.
ಇಂದು ಸನಾತನ ಧರ್ಮದ ಮಹತ್ವ ವಿಶ್ವಕ್ಕೆ ತಿಳಿದಿದೆ. ಭಾರತ ವಿಶ್ವಗುರುವಾಗುತ್ತಿರುವುದು ಕೆಲವರಿಗೆ ಅಸಹನೆಯಾಗಿದೆ. ರಾಮ ಮಂದಿರದ ಕಾರ್ಯ ಭರದಿಂದ ಸಾಗಿದ್ದು ಕೆಲವೇ ದಿನಗಳಲ್ಲಿ ರಾಮಮಂದಿರ ಪೂರ್ಣಗೊಳ್ಳಲಿದೆ ಎಂದರು.
ವಿಶ್ವ ಹಿಂದೂ ಪರಿಷತ್ತಿನ ವಿಜಯಪುರ ಜಿಲ್ಲಾ ಸಹ ಕಾರ್ಯದರ್ಶಿ ಸುನೀಲ್ ಜಮಖಂಡಿ ಮಾತನಾಡಿ, ಶಿವಮೊಗ್ಗ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿ ಹಿಂದೂಗಳ ಮನೆಗಳ ಮೇಲೆ ಕಲ್ಲು ಎಸೆಯಲಾಗಿದೆ. ಹಿಂದೂಗಳ ಮೇಲೆ ದಾಳಿ ಮಾಡುವ ಕೆಲಸ ದುಷ್ಟಶಕ್ತಿ ಮತಾಂಧರು ಮಾಡಿದ್ದಾರೆ. ಹಿಂದೂಗಳ ರಕ್ಷಣೆಗೆ ಆಗಮಿಸಿದ ಪೊಲೀಸರ ಮೇಲೆ, ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆ ಕಲ್ಲು ತೋರಿದ್ದಾರೆ. ಕಾಶ್ಮೀರದ ಹಿಂದೂಗಳ ಮೇಲೆ ಆದಂತಹ ಕಗ್ಗೊಲೆ ದಾಳಿ ಆತಂಕ ಈಗ ಕರ್ನಾಟಕದಲ್ಲಿ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಪ್ರಭು ಕಡಿ ಮಾತನಾಡಿದರು. ಪಟ್ಟಣದ ಓಂ ಶಾಂತಿ ಮುಂಭಾಗದ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿದ ಶೌರ್ಯ ಜಾಗರಣಾ ರಥಯಾತ್ರೆಯನ್ನು ಸಕಲ ಮಂಗಲವಾದ್ಯಗಳೊಂದಿಗೆ ಬರಮಾಡಿಕೂಳ್ಳಲಾಯಿತು. ಬಿಜೆಪಿ ಮುಖಂಡರಾದ ಮಾಣಿಕಚಂದ ದಂಡಾವತಿ, ವಿಕ್ರಮ್ ಓಸ್ವಾಲ್, ಸಂತೋಷ ರಾಠೋಡ ರಾಜು ಬಳ್ಳೊಳ್ಳಿ, ನಿಂಗರಾಜ ಮಹೇಂದ್ರಕರ್, ಜಗನ್ನಾಥ ಗೌಳಿ, ಜಗದೀಶ್ ಪಂಪಣ್ಣನವರ, ಅಶೋಕ ರಾಠೋಡ, ಲಕ್ಷಣ ಬಿಜ್ಜೂರ, ಶೇಖರ ಢವಳಗಿ, ಹಣಮಂತ ಕಲ್ಯಾಣಿ, ಪುನೀತ ಹಿಪ್ಪರಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.