ವಿಜಯಪುರ: ಹಿಜಾಬ್, ಕೇಸರಿ ಶಾಲು ವಿವಾದದ ನಡುವೆಯೇ ಇಂಡಿ ಪಟ್ಟಣದ ಕಾಲೇಜೊಂದರ ವಿದ್ಯಾರ್ಥಿ, ಉಪನ್ಯಾಸಕ ಹೊಸದಾಗಿ ತಿಲಕ ವಿವಾದ ಸೃಷ್ಟಿಸಿದ್ದಾರೆ.
ಇಂಡಿ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಣೆಗೆ ತಿಲಕವಿಟ್ಟುಕೊಂಡು ಬಂದ ವಿದ್ಯಾರ್ಥಿಗೆ ತರಗತಿ ಪ್ರವೇಶಕ್ಕೆ ಉಪನ್ಯಾಸಕರು ನಿರಾಕರಿಸಿದ ಕಾರಣ ಇಬ್ಬರ ನಡುವೆ ವಾಗ್ವಾದ ನಡೆಯಿತು.
ಪದವಿ ವಿದ್ಯಾರ್ಥಿ ಗಂಗಾಧರ ಬಡಿಗೇರ ಹಣೆಗೆ ತಿಲಕವಿಟ್ಟುಕೊಂಡು ಬಂದಾಗ ಕಾಲೇಜಿನ ದೈಹಿಕ ಉಪನ್ಯಾಸಕ ಶಿಕ್ಷಣ ಉಪನ್ಯಾಸಕ ಸಂಗಮೇಶ ಗೌಡ ತಡೆದರು. ಈಗಾಗಲೇ ಹಿಜಾಬ್, ಕೇಸರಿ ಶಾಲಿನ ವಿವಾದ ತಲೆದೋರಿದೆ. ಈ ನಡುವೆ ತಿಲಕವಿಟ್ಟುಕೊಂಡು ಬರುವುದು ಸರಿಯಲ್ಲ ಎಂದರು.
ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿ, ಹಿಜಾಬ್ ಹಾಗೂ ಕೇಸರಿ ಶಾಲು ಹೊರತು ಪಡಿಸಿ ಹಣೆಗೆ ಕುಂಕುಮ - ನಾಮ ಹಾಕಲು ಯಾಕೆ ಅನುಮತಿಯಿಲ್ಲ ಎಂದು ಪ್ರಶ್ನಿಸಿದ ಕಾರಣ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.
ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇಬ್ಬರನ್ನೂ ಸಮಾಧಾನ ಪಡಿಸಿದರು.