ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಸೋಮವಾರ ತಡರಾತ್ರಿ ವರೆಗೂ ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.
ಮತ ಎಣಿಕೆ ನಡೆದ ನಗರದ ಸ್ಟೇಷನ್ ರಸ್ತೆಯ ದರ್ಬಾರ್ ಹೈಸ್ಕೂಲ್ ಮೈದಾನದಿಂದ ಗೆದ್ದ ಅಭ್ಯರ್ಥಿಗಳನ್ನು ತೆರೆದ ವಾಹನಗಳಲ್ಲಿ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ತಮ್ಮ ವಾರ್ಡ್ಗಳ ವರೆಗೆ ಮೆರವಣಿಗೆ ಮಾಡಿದರು.
ನೂರಾರು ಬೈಕು, ಕಾರುಗಳೊಂದಿಗೆ ವಾರ್ಡ್ಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಗುಲಾಲ್ ಎರಚಿ, ಹೂವಿನ ಹಾರ ಹಾಕಿ ನೂತನ ಕಾರ್ಪೊರೇಟರ್ಗಳನ್ನು ಸನ್ಮಾನಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಗೆದ್ದವರು ದೇವಸ್ಥಾನ, ಮಸೀದಿಗಳಿಗೆ ಭೇಟಿ ನೀಡಿ, ದರ್ಶನ ಪಡೆದರು. ನೂತನ ಕಾರ್ಪೊರೇಟರ್ಗಳು ವಾರ್ಡಿನ ಪ್ರಮುಖರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದರು.
ಮಹಿಳೆಯರು ನೂತನ ಪಾಲಿಕೆ ಸದಸ್ಯರಿಗೆ ಆರತಿ ಬೆಳಗಿ, ಸಿಹಿ ತಿನ್ನಿಸಿದರು. ತಮ್ಮ ಗೆಲುವಿಗೆ ಶ್ರಮಿಸಿದ ಮುಖಂಡರು, ಕಾರ್ಯಕರ್ತರಿಗೆ ಅಭ್ಯರ್ಥಿಗಳು ಸಿಹಿ ಹಂಚಿ, ಸನ್ಮಾನಿಸಿದರು.
ಬಿಜೆಪಿ ಸನ್ಮಾನ ಇಂದು:
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಿ.ಜೆ.ಪಿ.ಅಭ್ಯರ್ಥಿಗಳಿಗೆ ನವೆಂಬರ್ 1 ರಂದು ಸಂಜೆ 4 ಕ್ಕೆ ನಗರದ ಡಾ. ಬಾಬು ಜಗಜೀವನರಾಮ ವೃತ್ತದಿಂದ (ಗೋದಾವರಿ ಹೋಟೆಲ್) ಗಾಂಧಿಚೌಕ ಮೂಲಕ ಶ್ರೀ ಸಿದ್ದೇಶ್ವರ ಗುಡಿವರೆಗೆ ಮೆರವಣಿಗೆ ಮಾಡಲಾಗುವುದು.
ಬಳಿಕ ಶ್ರೀ ಸಿದ್ದೇಶ್ವರ ಗುಡಿ ಮುಂದೆ ವಿಜಯೋತ್ಸವ ಹಾಗೂ ವಿಜೇತರಾದ ಬಿ.ಜೆ.ಪಿ.ಅಭ್ಯರ್ಥಿಗಳಿಗೆ ಅಭಿನಂದನೆ ಮಾಡಲಾಗುವುದು.
ಶಾಸಕ ಬಸನಗೌಡ ಪಾಟೀಲ ಯತ್ನಾಳ, ಅಭಯ ಪಾಟೀಲ, ಪಿ.ರಾಜೀವ, ನಿರ್ಮಲಕುಮಾರ ಸುರಾನಾ, ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಚಂದ್ರಶೇಖರ ಕವಟಗಿ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.