ವಿಜಯಪುರ: ನಾಡಹಬ್ಬ ದಸರಾ ಅಂಗವಾಗಿ ಆಯುಧ ಪೂಜೆ, ದುರ್ಗಾದೇವಿ ಆರಾಧನೆನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು.
ಆಯುಧ ಪೂಜೆ ಅಂಗವಾಗಿ ಗುರುವಾರ ಕೃಷಿ ಉಪಕರಣಗಳು, ಬೈಕ್, ಕಾರು, ಟ್ರಾಕ್ಟರ್, ಬಸ್, ಲಾರಿ ಸೇರಿದಂತೆ ವಾಹನಗಳನ್ನು ಹೂವುಗಳಿಂದ ಅಲಂಕರಿಸಿ, ಕುಂಬಳಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.
ವಿಜಯದಶಮಿ ಅಂಗವಾಗಿವಿದ್ಯಾ ದೇವತೆ ಸರಸ್ವತಿ, ಶಾರದಾ ಮಾತೆ ಹಾಗೂ ದುರ್ಗಾದೇವಿಯರಿಗೆ ಶುಕ್ರವಾರ ಪೂಜೆ ಸಲ್ಲಿಸಲಾಯಿತು.
ಮಹಾನವಮಿ ಅಂಗವಾಗಿ ನಗರದ ಪ್ರಮುಖ ದೇವಾಲಯಗಳ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ನವದುರ್ಗೆಯರಿಗೆ ವಿಶೇಷ ಪೂಜೆ ಸಲ್ಲಿಸಿ, ಪಲ್ಲಕ್ಕಿಯಲ್ಲಿ ದೇವಿ ಮೂರ್ತಿಯನ್ನು ಮೆರವಣೆಗೆ ಮಾಡಿ, ವಿಸರ್ಜಿಸಲಾಯಿತು.
ಸಂಜೆ ಬನ್ನಿ ಮುಡಿಯುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು. ‘ಬನ್ನಿಯಂತೆ ಬಾಳು ಬಂಗಾರವಾಗಲಿ’ ಎಂದು ಶುಭ ಹಾರೈಸಲಾಯಿತು.
ನಡೆಯದ ಬನ್ನಿ ವಿನಿಯಮಯ
ಜನಪ್ರತಿನಿಧಿಗಳು ತಮ್ಮ ಮನೆಗಳಲ್ಲಿ ದಸರಾ ಅಂಗವಾಗಿ ಸಾಂಪ್ರದಾಯಿಕ ನಡೆಸಿಕೊಂಡು ಬರುತ್ತಿದ್ದ ಬನ್ನಿ ವಿನಿಮಯ ಕಾರ್ಯಕ್ರಮವನ್ನು ಕೈಬಿಟ್ಟು, ಬೆಂಬಲಿಗರು, ಅಭಿಮಾನಿಗಳು ಮತ್ತು ಕ್ಷೇತ್ರದ ಜನರಿಗೆ ಕೇವಲ ಹಬ್ಬದ ಶುಭ ಕೋರಿದರು.