ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲೇ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭ

ಭರದಿಂದ ಸಾಗಿದ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ
Last Updated 16 ನವೆಂಬರ್ 2022, 12:37 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ಸಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ವಿಜಯಪುರ ಜನತೆ ವಿಮಾನದಲ್ಲಿ ಸಂಚರಿಸುವ ಅವಕಾಶ ಲಭ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಹೊರವಲಯದ ಬುರಾಣಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಬುಧವಾರ ಪರಿಶೀಲನೆ ನಡೆಸಿದ ಬಳಿಕ ಅವರುಮಾತನಾಡಿದರು.

ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್ 72 ದಿಂದ ಏರ್‌ಬಸ್ 320 ವಿಮಾನಗಳ ಹಾರಾಟಕ್ಕಾಗಿ ಅನುಕೂಲವಾಗುವಂತೆ ಹೆಚ್ಚುವರಿಯಾಗಿ ₹ 127.29 ಕೋಟಿ ಹೆಚ್ಚುವರಿ ಅನುದಾನದ ಕಾಮಗಾರಿಗೆ ಸರ್ಕಾರದಿಂದ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಈ ಎಲ್ಲ ತಾಂತ್ರಿಕ ಹಾಗೂ ಭೌತಿಕ ಕಾಮಗಾರಿಗಳು ಶೀಘ್ರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ವಿಜಯಪುರ ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ದೊರಕಲಿದ್ದು, ಕೂಡಲ ಸಂಗಮ, ಆಲಮಟ್ಟಿ, ಕೊಲ್ಲಾಪೂರ, ಸೊಲ್ಲಾಪೂರ ಹೀಗೆ ಪ್ರಸಿದ್ಧ ತಾಣಗಳಿಗೆ ಹೋಗಲು ಈ ವಿಮಾನ ನಿಲ್ದಾಣ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದರು.

ಸಾಮಾನ್ಯ ಮನುಷ್ಯನು ವಿಮಾನದಲ್ಲಿ ಹಾರಾಟ ಮಾಡಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ದಿ ನಿಗಮದಿಂದ ವಿಜಯಪುರ ಸೇರಿದಂತೆ ಶಿವಮೊಗ್ಗ, ಹಾಸನ, ರಾಯಚೂರು, ದಾವಣಗೆರೆ, ಕೊಪ್ಪಳ, ಬಳ್ಳಾರಿ ಹಾಗೂ ಕಾರವಾರದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ವಿಜಯಮಹಾಂತೇಶ ಮಾತನಾಡಿ, ವಿಜಯಪುರ ವಿಮಾನ ನಿಲ್ದಾಣದಲ್ಲಿ ಎಟಿಆರ್-72 ಮಾದರಿಯ ವಿಮಾನಗಳ ಹಾರಾಟಕ್ಕಾಗಿ ₹ 220 ಕೋಟಿ ಮಂಜೂರಾಗಿದ್ದು, ಎರಡು ಹಂತದಲ್ಲಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಮೊದಲನೇ ಹಂತದ ಕಾಮಗಾರಿಗಾಗಿ ₹95 ಕೋಟಿ ಹಾಗೂ ಎರಡನೇಯ ಹಂತದ ಕಾಮಗಾರಿಗೆ ₹ 125 ಕೋಟಿಯನ್ನು ಕಾಯ್ದಿರಿಸಲಾಗಿದೆ. ಮೊದಲನೇಯ ಹಂತದ ಕಾಮಗಾರಿಯಲ್ಲಿ ಶೇ 64.75 ರಷ್ಟು ಭೌತಿಕ ಹಾಗೂ ಶೇ 64.75 ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಎರಡನೇಯ ಹಂತದ ಸಿವಿಲ್ ಕಾಮಗಾರಿ ಭೌತಿಕ ಪ್ರಗತಿ ಶೇ 40.93 ರಷ್ಟಾಗಿದ್ದು, ಆರ್ಥಿಕ ಪ್ರಗತಿ ಶೇ 40.93 ರಷ್ಟು ಸಾಧಿಸಲಾಗಿದೆ ಎಂದು ವಿವರಣೆ ನೀಡಿದರು.

ಎರಡನೇಯ ಹಂತದ ₹ 125 ಕೋಟಿ ಅನುದಾನವನ್ನು ಎರಡು ಉಪಕಾಮಗಾರಿಗಳಾಗಿ ವಿಂಗಡಿಸಿ ₹ 106 ಕೋಟಿ ವೆಚ್ಚದಲ್ಲಿ ಸಿವಿಲ್ ಕಾಮಗಾರಿ ಹಾಗೂ ₹ 19 ಕೋಟಿ ವೆಚ್ಚದಲ್ಲಿ ಏವಿಯೋನಿಕ್ಸ್, ಸೆಕ್ಯೂರಿಟಿ ಇಕ್ಯೂಪ್‌ಮೆಂಟ್ಸ್ ಉಪಕಾಮಗಾರಿಗೆ ವಿಂಗಡನೆ ಮಾಡಲಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ದಿ ನಿಗಮದ ಕಾರ್ಯಕಾರಿ ನಿರ್ದೇಶಕ ಡಿ.ಪಿ.ಪ್ರಕಾಶ, ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಭಿಷ್ಟ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜು ಮುಜುಂದಾರ, ಇ.ಬಿ.ಚಿಕ್ಕಲಕಿ, ಎ.ಇ. ರವಿ ಪವಾರ, ರೇವಣ್ಣ ಮಸಳಿ, ಹೈಡೆಕ್ ಪಿಎಂಸಿ ಜೋಸ್ ಥಾಮಸ್ ಇದ್ದರು.

***

ಆಲಮಟ್ಟಿ: ಸೀ-ಪ್ಲೇನ್ ಹಾರಾಟಕ್ಕೆ ಯೋಜನೆ

ವಿಜಯಪುರ: ರಾಜ್ಯದ ಕಬನಿ, ಕೆಆರ್‌ಎಸ್, ಹಿಡಕಲ್ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸೀ-ಪ್ಲೇನ್ ಹಾರಾಟಕ್ಕೆ ಅವಕಾಶದ ಕುರಿತು ಸಮೀಕ್ಷೆ ನಡೆಸಲು ಅಧ್ಯಯನ ನಡೆಸಲಾಗುತ್ತಿದೆ ಎಂದು ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ಹೇಳಿದರು.

ಸೀ-ಪ್ಲೇನ್‌ಗಳ ಸಂಚಾರಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಅದರನ್ವಯ ರಾಜ್ಯದಲ್ಲಿಯೂ ಈ ಮಾದರಿಯ ಸೀ-ಪ್ಲೇನ್‌ಗಳ ಹಾರಾಟದ ಮೂಲಕ ಸಾಹಸ ಪ್ರವಾಸೋದ್ಯಮ (ಅಡ್ವೆಂಚರ್ ಟೂರಿಸಂ) ಉತ್ತೇಜಿಸಲು ರಾಜ್ಯ ಸರ್ಕಾರ ಕಾರ್ಯ ಯೋಜನೆ ರೂಪಿಸುತ್ತಿದೆ ಎಂದರು.

ಆಲಮಟ್ಟಿ ಜಲಾಶಯದಲ್ಲಿಯೂ ಸಹ ಸೀ-ಪ್ಲೇನ್ ಹಾರಾಟದ ಅವಕಾಶ ಕಲ್ಪಿಸಲು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಕಾರ್ಯಕ್ಕೆ ಈ ವಿಮಾನ ನಿಲ್ದಾಣ ಪೂರಕವಾಗಲಿದೆ ಎಂದು ಹೇಳಿದರು.

***

ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ವಿಮಾನ ನಿಲ್ದಾಣ ಎಂದು ಹೆಸರಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ

–ಡಾ.ಶೈಲೇಂದ್ರ ಬೆಲ್ದಾಳೆ, ಅಧ್ಯಕ್ಷ, ಕೆಎಸ್‌ಐಐಡಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT