ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಶಿಲಾ ರಚನೆಯಲ್ಲಿರುವ ವಿಜಯಪುರಕ್ಕೆ ಭೂಕಂಪನದಿಂದ ಹೆಚ್ಚು ಹಾನಿಯಾಗದು: ಡಿಸಿ

ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್‌ ಸ್ಪಷ್ಟನೆ
Last Updated 25 ಆಗಸ್ಟ್ 2022, 15:32 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯು ಕಪ್ಪು ಶಿಲೆಯಿಂದ ಆವೃತವಾಗಿದ್ದು, ಇದು ಕಡಿಮೆ ಮತ್ತು ಮಧ್ಯಮ ತೀವ್ರತೆಯುಳ್ಳ ವಲಯವಾಗಿರುವುದರಿಂದ ಭೂಕಂಪನಗಳು ಯಾವುದೇ ಹಾನಿ ಸೃಷ್ಟಿಸುವುದಿಲ್ಲ. ಸಾರ್ವಜನಿಕರು ಭಯಪಡುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ತಿಳಿಸಿದ್ದಾರೆ.

ಜಿಲ್ಲೆಯು ಭೌಗೋಳಿಕವಾಗಿ ದಖನ್ ಪ್ರಸ್ಥಭೂಮಿಯಲ್ಲಿದ್ದು, ಈ ಪ್ರದೇಶವು ಅಂದಾಜು ಶೇ 80 ರಷ್ಟು ಬೆಸಾಲ್ಟ್ (ಕಪ್ಪು ಶಿಲೆ)ಶಿಲೆಯಿಂದ ಆವೃತವಾಗಿದ್ದು, ಭಾರತದ ಭೂಕಂಪನ ವಲಯಗಳ ನಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಭೂಸ್ಥರವು ವಲಯ-2 ಮತ್ತು ವಲಯ-3ರ ವ್ಯಾಪ್ತಿಯಲ್ಲಿ ಗುರುತಿಸಲಾಗಿರುತ್ತದೆ. ಹೀಗಾಗಿಇದು ಕಡಿಮೆ ಮತ್ತು ಮಧ್ಯಮ ತೀವ್ರತೆಯುಳ್ಳ ವಲಯವಾಗಿರುತ್ತದೆ. ಈ ರೀತಿಯ ಪ್ರದೇಶಗಳಲ್ಲಿನ ಭೂಕಂಪನಗಳು ಯಾವುದೇ ಹಾನಿಯನ್ನು ಸೃಷ್ಟಿಸುವುದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರದ ತಜ್ಞರ ತಂಡವನ್ನು ಜಿಲ್ಲೆಗೆ ನಿಯೋಜಿಸಲು ಸರ್ಕಾರಕ್ಕೆ ಸಹ ಪತ್ರ ಬರೆಯಲಾಗಿದ್ದು, ಶೀಘ್ರವೇ ತಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಿ ವಿಸ್ತ್ರತವಾಗಿ ಪರಿಶೀಲನೆ ಕೈಗೊಳ್ಳಲಿದೆ. ಇದಲ್ಲದೆ ಶಾಲಾ-ಕಾಲೇಜು, ಹಾಸ್ಟೆಲ್‌ಗಳಲ್ಲಿ ಭೂಕಂಪನ ಕುರಿತು ಅರಿವನ್ನು ಮೂಡಿಸಲು ವಿಪತ್ತು ನಿರ್ವಹಣಾ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಸಾಲಿನಲ್ಲಿ ಅಧಿಕೃತವಾಗಿ 7 ಬಾರಿ ಕಡಿಮೆ ತೀವ್ರತೆಯುಳ್ಳ ಭೂಕಂಪನವಾಗಿರುವುದು ಖಚಿತವಾಗಿದೆ ಎಂದು ಹೇಳಿದರು.

ವದಂತಿಗೆ ಕಿವಿಗೊಡಬೇಡಿ:

ಭೂಂಕಪನಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ದವಾಗಿದೆ. ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿ ಕೊಡಬಾರದು ಮತ್ತು ಆತಂಕಕ್ಕೆ ಒಳಗಾಗಬಾರದು ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

***

ಸಹಾಯವಾಣಿ ಸಂಪರ್ಕಿಸಿ

ಭೂಕಂಪನದಂತಹ ತುರ್ತು ಸಂದರ್ಭಗಳಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 1077. ಟೋಲ್ ಫ್ರೀ ಸಂಖ್ಯೆ 08352-221261, ಪೊಲೀಸ್ ಸಹಾಯವಾಣಿ ಸಂಖ್ಯೆ: 100 (ಟೋಲ್ ಫ್ರೀ) 112 (ಟೋಲ್ ಫ್ರೀ) 08352-250844 ಅಥವಾ ಆರೋಗ್ಯ ಸಹಾಯವಾಣಿ ಸಂಖ್ಯೆ: 104 (ಟೋಲ್ ಫ್ರೀ) ಸಂಖ್ಯೆಗಳಿಗೆ ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

****

ಮುಂಜಾಗ್ರತಾ ಕ್ರಮ

ವಿಜಯಪುರ: ಭೂಕಂಪನ ಸಂದರ್ಭದಲ್ಲಿ ಅನುಸರಿಸಬೇಕುಪ್ರಮುಖ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲೆಯ ಜನರಿಗೆಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಮನೆಯ ಕಪಾಟುಗಳನ್ನು ಬೀಳದಂತೆ ಇಡಬೇಕು ಹಾಗೂ ಎತ್ತರದ ಪಿಠೋಪಕರಣಗಳು ಇದ್ದಲ್ಲಿ ಅಲುಗಾಡದಂತೆಗೋಡೆಗೆ ಸ್ಥಿರಪಡಿಸಬೇಕು. ಮನೆಯಲ್ಲಿ ಮತ್ತು ಸಮೀಪದಲ್ಲಿ ಸುರಕ್ಷಿತ ಆಶ್ರಯ ತಾಣಗಳನ್ನು ಮತ್ತು ಅವುಗಳ ಮಾರ್ಗಗಳನ್ನು ಗುರುತಿಸಿಟ್ಟುಕೊಳ್ಳಬೇಕು. ಕಟ್ಟಡದಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ಎಂಜಿನಿಯರ್‌ಗಳಿಂದ ಸಲಹೆ ಪಡೆದು ಮರು ರೂಪಿಸಿಕೊಳ್ಳಬೇಕು. ಗಾಜಿನ ಕಿಟಕಿಯಿಂದ ದೂರವಿರಬೇಕು. ಭಾರವಾದ ವಸ್ತುಗಳಿಂದ ದೂರವಿರಬೇಕು. ಕುರ್ಚಿ, ಟೇಬಲ್, ಮಂಚದ ಕೆಳಗಡೆ ಅವಿತುಕೊಳ್ಳಬೇಕು. ಗ್ಯಾಸ್ ಸ್ಟೌಗಳನ್ನು ಮತ್ತು ವಿದ್ಯುತ್ ದೀಪಗಳನ್ನು ಆರಿಸಬೇಕು ಎಂದು ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT