ಭಾನುವಾರದ ಕರ್ಪ್ಯೂಗೆ ಜನ ಸ್ವಯಂ ಪ್ರೇರಿತ ಬೆಂಬಲ ವ್ಯಕ್ತಪಡಿಸುವ ಮೂಲಕ ಕೋವಿಡ್ ಹರಡದಂತೆ ತಡೆಯಲು ಸಹಕಾರ ನೀಡಿದ್ದಾರೆ. ಔಷಧ ಅಂಗಡಿ, ಪೆಟ್ರೋಲ್ ಬಂಕ್ ಹೊರತು ಪಡಿಸಿ ಬಹುತೇಕ ಅಂಗಡಿ, ಹೋಟೆಲ್, ಬಾಗಿಲು ಮುಚ್ಚಿವೆ. ಬಸ್, ಆಟೊ ಸೇರಿದಂತೆ ಎಲ್ಲ ರೀತಿಯ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ನಗರದ ರಸ್ತೆಗಳು, ಬಸ್ ನಿಲ್ದಾಣ, ಮಾರುಕಟ್ಟೆ ಭಣಗುಡುತ್ತಿವೆ. ಕಾರು, ಬೈಕುಗಳಲ್ಲಿ ರಸ್ತೆಯಲ್ಲಿ ತಿರುಗಾಡುವವರನ್ನು ಪೊಲೀಸರು ತಡೆದು ವಿಚಾರಣೆ ನಡೆಸಿ ಅಗತ್ಯ ಇರುವವರನ್ನು ಮಾತ್ರ ಬಿಡುತ್ತಿದ್ದಾರೆ. ಅನಗತ್ಯವಾಗಿ ತಿರುಗಾಡುವವರಿಗೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸುತ್ತಿದ್ದಾರೆ.