ವಿಜಯಪುರ: ತಹಶೀಲ್ದಾರ್ ಮೋಹನಕುಮಾರಿ ಅವರ ಖಾಸಗಿ ವಾಹನ ಚಾಲಕ ಶನಿವಾರ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ನೂತನ ಪ್ರವಾಸಿ ಮಂದಿರದ ಕಟ್ಟಡದ ಕಿಟಕಿಗೆ ನೇಣು ಹಾಕಿಕೊಂಡು ಚಾಲಕ ಆರೀಫ್ ಜುನೇದಿ (39) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಾಲ್ಕು ದಿನಗಳಿಂದ ಮನೆಯಿಂದ ಕಾಣೆಯಾಗಿದ್ದ ಆರೀಫ್, ಕೆಲಸಕ್ಕೂ ಹಾಜರಿರಲಿಲ್ಲ. ಹೀಗಾಗಿ ಕುಟುಂಬ ಸದಸ್ಯರು ಕಾಣೆಯಾಗಿರುವ ಕುರಿತು ಶನಿವಾರ ಮಧ್ಯಾಹ್ನ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಂಜೆ 5 ಗಂಟೆಗೆ ಆರೀಫ್ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಘಟನೆ ಮಾಹಿತಿ ಸಿಗುತ್ತಲೇ ವಿಜಯಪುರ ತಹಶೀಲ್ದಾರ್ ಮೋಹನಕುಮಾರಿ ಡಿಎಸ್ಪಿ ಲಕ್ಷ್ಮೀನಾರಾಯಣ ಸೇರಿದಂತೆ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆ ಆರೋಪಿಗಳ ಸೆರೆ
ವಿಜಯಪುರ: ತಾಲ್ಲೂಕಿನ ಅರಕೇರಿ ತಾಂಡಾ ನಂ.2ರಲ್ಲಿ ಜೂನ್ 10ರಂದು ನಡೆದಿದ್ದ ಸಂತೋಷ ಜಾದವ (31) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಗ್ರಾಮೀಣ ಠಾಣೆಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಅರಕೇರಿ ತಾಂಡಾ ನಂ-2ರ ಸುರೇಶ ರಾಠೋಡ, ಸಂತೋಷ ಪವಾರ, ಸುನೀಲ ಪವಾರ, ಅನೀಲ ಪವಾರ, ಕ್ಯಾತನಕೇರಿ ತಾಂಡಾದ ರವಿ ರಾಠೋಡ ಮತ್ತು ಚಂದ್ರಶೇಖರ ರಾಠೋಡ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ ಎರಡು ಮೋಟಾರ್ ಸೈಕಲ್, ಚಾಕು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡು, ಕೋರ್ಟ್ಗೆ ಹಾಜರು ಪಡಿಸಿದ್ದಾರೆ.