ಸಿಂದಗಿ: ‘ಪ್ರಜಾವಾಣಿ ಪ್ರಜೆಗಳ ವಾಣಿ, ಜನರ ಮುಖವಾಣಿ. ವಿದ್ಯಾರ್ಥಿಗಳ ಭವಿಷ್ಯದ ದಿಕ್ಸೂಚಿ. ಕಳೆದ 14 ವರ್ಷಗಳಿಂದ ಸಿಂದಗಿಯಲ್ಲಿ ಪ್ರಜಾವಾಣಿ ಸಮೀಕ್ಷಾ ಸಪ್ತಾಹ ಹಮ್ಮಿಕೊಳ್ಳುವ ಮೂಲಕ ಪ್ರಜಾವಾಣಿ ಜನಸಾಮಾನ್ಯರ ಮಿತ್ರ ಆಗುವದರೊಂದಿಗೆ ವಿದ್ಯಾರ್ಥಿಗಳ ಮಿತ್ರ ಆಗಿದೆ’ ಎಂದು ಕುವೆಂಪು ವಿದ್ಯಾಲಯದ ಸಂಚಾಲಕ ಮಹೇಶ ದುತ್ತರಗಾಂವಿ ಪ್ರಜಾವಾಣಿ ಕುರಿತುಗಿ ಅಭಿಮಾನದ ಮಾತುಗಳನ್ನಾಡಿದರು.
ಇಲ್ಲಿಯ ಕುವೆಂಪು ವಿದ್ಯಾಲಯದಲ್ಲಿ ಶುಕ್ರವಾರ ಪ್ರಜಾವಾಣಿ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 14ನೇ ವರ್ಷದ ಪ್ರಜಾವಾಣಿ ಸಮೀಕ್ಷಾ ಸಪ್ತಾಹದ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘2011-12ನೇ ಸಾಲಿನಿಂದ ನಮ್ಮ ವಿದ್ಯಾಲಯದಲ್ಲಿ ಸತತ ಈ ಸಮೀಕ್ಷಾ ಸಪ್ತಾಹ ಕಾರ್ಯಕ್ರಮ ಆಯೋಜನೆ ಮಾಡುತ್ತಲೇ ಬರಲಾಗಿದೆ. ಏಳು ದಿನಗಳ ಕಾಲ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಪತ್ರಿಕೆ ಖರೀದಿಸಿಕೊಳ್ಳುತ್ತಾರೆ. ನಂತರ ಏಳು ದಿನಗಳಲ್ಲಿ ಪ್ರಜಾವಾಣಿಯಲ್ಲಿ ಪ್ರಕಟಗೊಂಡ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಕುರಿತು 100 ಅಂಕಗಳ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಂದ ವಿದ್ಯಾರ್ಥಿಗಳು ಬಹುಮಾನ ನೀಡಿ ಗೌರವಿಸಲಾಗುವುದು’ ಎಂದು ವಿವರಿಸಿದರು.
‘ವಿದ್ಯಾರ್ಥಿಗಳಲ್ಲಿ ಓದುವ ಸದಭಿರುಚಿ ಬೆಳೆಸುವ ಏಕಮೇವ ಉದ್ದೇಶ ಈ ಸಪ್ತಾಹದ್ದಾಗಿದೆ. ಐಎಎಸ್, ಐಪಿಎಸ್, ಐಎಫ್ಎಸ್ ಹಾಗೂ ಕೆಎಎಸ್ನಂಥ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿದ ಸಾಧಕರ ಬಾಯಿಂದ ಹೊರ ಬರುವ ಮೊದಲ ಮಾತೇ ಪ್ರಜಾವಾಣಿ ಓದು ತುಂಬಾ ಉಪಯೋಗವಾಗಿದೆ ಎಂಬುದು’ ಎಂದು ಹೇಳಿದರು.
ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಮಹಾನಂದ ಗೌಂಡಿ, ಅಶ್ವಿನಿ ನಡುವಿನಮನಿ, ಮಲ್ಲಿಕಾರ್ಜುನ ಬಿರಾದಾರ ಹಾಗೂ ಶೇಖರ ನಾಟೀಕಾರ ಇವರು ಹಿಂದಿನ ಪ್ರಜಾವಾಣಿ ಸಮೀಕ್ಷಾ ಸಪ್ತಾಹದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದರು. ಅಂದಿನಿಂದ ದಿನಂಪ್ರತಿ ಪ್ರಜಾವಾಣಿ ಓದುತ್ತಲೇ ಇರುವದರಿಂದ ಸರ್ಕಾರಿ ಉದ್ಯೋಗ ಪಡೆಯಲು ಸಾಧ್ಯವಾಗಿದೆ ಎಂದು ಪ್ರತಿಕ್ರಿಯಿಸಿದರು.
ವಿದ್ಯಾರ್ಥಿನಿಯರಾದ ರಕ್ಷಿತಾ ಪೂಜಾರಿ, ಮಲ್ಲಮ್ಮ ಬಿರಾದಾರ, ಅನಿತಾ ಜಮಾದಾರ ಮಾತನಾಡಿದದರು. ತಾಲ್ಲೂಕು ಪ್ರೆಸ್ ಕ್ಲಬ್ ಅಧ್ಯಕ್ಷ ಶಾಂತೂ ಹಿರೇಮಠ ಅವರು ವಿದ್ಯಾರ್ಥಿಗಳು ಪ್ರಜಾವಾಣಿ ಪತ್ರಿಕೆ ವಿತರಿಸುವ ಮೂಲಕ ಚಾಲನೆ ನೀಡಿದರು. 185 ವಿದ್ಯಾರ್ಥಿಗಳು ಪ್ರಜಾವಾಣಿಯನ್ನು ಖುಷಿಯಿಂದ ಪ್ರದರ್ಶಿಸಿದರು.
** ವ್ಯಾಕರಣ ಶುದ್ಧತೆ, ಭಾಷಾ ಪ್ರೌಢಿಮೆ, ನೈಜ ವರದಿ ಒಳಗೊಂಡ ಏಕಮೇವ ಕನ್ನಡ ದಿನಪತ್ರಿಕೆ ಅದು ಪ್ರಜಾವಾಣಿ. –ಮಹೇಶ ದುತ್ತರಗಾಂವಿ, ಸಂಚಾಲಕ, ಕುವೆಂಪು ವಿದ್ಯಾಲಯ ಸಿಂದಗಿ