ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ನರ್ಸ್‌ಗಳಿಗೆ ವಿಶ್ವಾದ್ಯಂತ ಬೇಡಿಕೆ: ಅಮೃತಾನಂದ ಮಹಾಸ್ವಾಮಿ

ಬಾಲಗಾಂವ ಆಶ್ರಮದ ಅಮೃತಾನಂದ ಮಹಾಸ್ವಾಮಿ
Last Updated 14 ಮೇ 2022, 10:35 IST
ಅಕ್ಷರ ಗಾತ್ರ

ವಿಜಯಪುರ: ಸೇವಾ ಮನೋಭಾವದಿಂದಾಗಿ ಭಾರತೀಯ ನರ್ಸ್‌ಗಳಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಎಂದು ಬಾಲಗಾಂವ ಆಶ್ರಮದ ಅಮೃತಾನಂದ ಮಹಾಸ್ವಾಮಿ ಹೇಳಿದರು.

ನಗರದ ಬಿ ಎಲ್ ಡಿ ಇ ಸಂಸ್ಥೆಯ ಬಿ.ಎಂ.ಪಾಟೀಲ ನರ್ಸಿಂಗ್ ಕಾಲೇಜು ಮತ್ತು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಆಶ್ರಯದಲ್ಲಿ ನಡೆದ ಆಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊರೊನಾ ಸಂಕಷ್ಟ ಸಮಯದಲ್ಲಿ ನರ್ಸ್‌ಗಳು ಜೀವದ ಹಂಗು ತೊರೆದು ಪತಿ, ಮಕ್ಕಳು, ಕುಟುಂಬ ಸದಸ್ಯರನ್ನು ದೂರವಿಟ್ಟು ರೋಗಿಗಳ ಉಪಚಾರ ಮಾಡಿದ್ದಾರೆ. ಅಷ್ಟೇ ಅಲ್ಲ, ರೋಗಿಗಳ ಕುಟುಂಬದವರಲ್ಲಿಯೂ ಆತ್ಮಸ್ಥೈರ್ಯ ತುಂಬಿದ್ದಾರೆ ಎಂದರು.

ವೃತ್ತಿಗಳಲ್ಲಿ ನರ್ಸಿಂಗ್ ವೃತ್ತಿ ಶ್ರೇಷ್ಠವಾಗಿದೆ. ನಮ್ಮ ದಾದಿಯರ ಸೇವಾ ಮನೋಭಾವನೆ ಜಗತ್ತಿನಲ್ಲಿಯೇ ಅತ್ಯುತ್ತಮವಾಗಿದ್ದು, ಎಲ್ಲ ದೇಶಗಳಲ್ಲಿ ಭಾರತೀಯ ನರ್ಸ್‌ಗಳಿಗೆ ಬೇಡಿಕೆಯಿದೆ. ಇದು ಅವರ ಸೇವಾಶಕ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ರೋಗಿಗಳಿಗೆ ತಾಯಿಯಂತೆ ಉಪಚರಿಸಿ ಮಾನಸಿಕವಾಗಿಯೂ ನೈತಿಕ ಸ್ಥೈರ್ಯ ತುಂಬುವ ಮೂಲಕ ರೋಗಿಗಳು ಬೇಗ ಗುಣಮುಖರಾಗಲು ಕಾರಣರಾಗಿದ್ದಾರೆ. ಈ ಸೇವೆ ಇದೇ ರೀತಿ ಮುಂದುವರೆಯಲಿ ಎಂದು ಅವರು ಹೇಳಿದರು.

ಆಶಾ ಎಂ. ಪಾಟೀಲ ಮಾತನಾಡಿ, ನರ್ಸ್‌ಗಳ ಸೇವೆಗೆ ಹಲವಾರು ಶತಮಾನಗಳ ಇತಿಹಾಸವಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ರೋಗಿಗಳ ಆರೈಕೆ ಮಾಡುವುದರಿಂದ ಹಿಡಿದು ಯುದ್ಧ ಮತ್ತು ಕೊರೊನಾದಂಥ ಸಂಕಷ್ಟದ ಸಮಯದಲ್ಲಿಯೂ ಶುಶ್ರೂಷಕರು ಅತ್ಯುತ್ತಮ ಸೇವೆ ಮಾಡುವ ಮೂಲಕ ರೋಗಿಗಳು, ಅವರ ಸಂಬಂಧಿಕರು ಮತ್ತು ಭಾರತೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ನರ್ಸ್‌ಗಳ ಸೇವೆಯನ್ನು ನೋಡಿದರೆ ನಾನು ಏಕೆ ನರ್ಸಿಂಗ್ ಕ್ಷೇತ್ರಕ್ಕೆ ಬರಲಿಲ್ಲ ಎಂದು ಅನಿಸುತ್ತಿದೆ. ನರ್ಸ್ ಗಳಿಗೆ ಏನೇ ಕಷ್ಟ, ಸಮಸ್ಯೆಗಳಿದ್ದರೂ ಬಿ ಎಲ್ ಡಿ ಇ ಸಂಸ್ಥೆ ಸದಾ ಅವರ ಜೊತೆಗೆ ಇರಲಿದೆ ಎಂದು ಹೇಳಿದರು.

ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ರೋಗಿಗಳಿಗೆ ವೈದ್ಯರು ಚಿಕಿತ್ಸೆ ನೀಡಿದರೆ, ನರ್ಸ್‌ಗಳು ಅವರಷ್ಟೇ ಮಹತ್ವದ ಆರೈಕೆಯನ್ನು ಮಾಡುತ್ತಾರೆ. ವೈದ್ಯರ ಜೊತೆಗೆ ಅವರ ಸೇವೆಯೂ ಸಮಾನವಾಗಿದೆ. ನರ್ಸ್‌ಗಳು ಆಸ್ಪತ್ರೆಗಳ ಆಧಾರ‌ ಸ್ಥಂಬವಾಗಿ ಕೆಲಸ ಮಾಡುತ್ತಾರೆ. ಮುಂಬರುವ ದಿನಗಳಲ್ಲಿ ವೈದ್ಯರು ಮತ್ತು ನರ್ಸ್‌ಗಳಿಬ್ಬರೂ ಜೊತೆಗೂಡಿ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಿಷ್ಠವಾಗಿ ಮಾಡೋಣ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಶಾಲ್ಮೊನ್ ಚೋಪಡೆ,ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ, ಎಸ್‌ ಎನ್ ಎ ಸಲಹೆಗಾರ ಪ್ರೊ. ಸಂತೋಷ ಇಂಡಿ, ಪ್ರೊ. ಜಯಶ್ರೀ ಪೂಜಾರಿ, ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಜಯಂತಿ, ಡಾ. ಶ್ವೇತಾ ಜವಳಿ, ಡಾ. ಸುಚಿತ್ರಾ ರಾಟಿ, ಪ್ರೊ. ಅಮರನಾಥ, ಪ್ರೊ. ಬಶೀರ ಅಹ್ಮದ್‌, ಕವಿತಾ ಕೆ., ಸಂಕಪ್ಪ ಗುಲಗಂಜಿ, ಮಂಜುನಾಥ ಪಾಟೀಲ, ಸತೀಶ ನಡಗಡ್ಡಿ, ಅಪ್ಪನಗೌಡ ಪಾಟೀಲ, ಗುರು ಗುಗ್ಗರಿಉಪಸ್ಥಿತರಿದ್ದರು.

***

ಕೊರೊನಾ ಸಂದರ್ಭದಲ್ಲಿ ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲಿ ಕುಳಿತರೆ, ಶುಶ್ರೂಷಕರು ಮಾತ್ರ ತಮ್ಮ ವೈಯಕ್ತಿಕ ಜೀವನ ಬದಿಗಿಟ್ಟು ನಿರಂತರವಾಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸೇವೆ ಮಾಡಿದ್ದಾರೆ

–ಆಶಾ ಎಂ. ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT