<p><strong>ಕಲಬುರಗಿ</strong>: ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,<br>ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,<br>ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ<br>ಇದೇ ಅಂತರಂಗಶುದ್ಧಿ, ಇದೇ ಬಹಿರಂಗ ಶುದ್ಧಿ<br>ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ...</p><p>ಇವು ಜಗಜ್ಯೋತಿ ಬಸವಣ್ಣವರ ವಚನವೊಂದರ ಸಾಲುಗಳು. ಈ ಸಪ್ತ ಸೂತ್ರಗಳು ಮನುಜರೆಲ್ಲರ ಬದುಕಿಗೂ ದಾರಿದೀವಿಗೆಯೇ ಸರಿ. ಇವುಗಳನ್ನು ಅಳವಡಿಸಿಕೊಂಡರೆ ಬದುಕು ಬೆಳಕು ಕಾಣುತ್ತದೆ.</p><p>ಈಗ್ಗೆ 900 ವರ್ಷಗಳ ಹಿಂದೆ 12ನೇ ಶತಮಾನದಲ್ಲಿ ಬಸವಣ್ಣ ಹಾಗೂ ಬಸವಾದಿ ಪ್ರಮಥರು ಸಮಾನತೆ, ಅರಿವು, ದಾಸೋಹ, ಕಾಯಕ ಸೇರಿದಂತೆ ಹತ್ತಾರು ಕ್ಷೇತ್ರಗಳ ಬಗೆಗೆ ಸಾವಿರ–ಸಾವಿರ ಸಂಖ್ಯೆಯಲ್ಲಿ ಅನುಭವ ಜನ್ಯವಾದ ವಚನಗಳನ್ನು ನೀಡಿದ್ದಾರೆ. ‘ಶ್ರೇಷ್ಠ ಬದುಕಿನ ವಿಧಾನ’ವನ್ನು ಸರಳಗನ್ನಡದಲ್ಲಿ ಶ್ರೀಸಾಮಾನ್ಯರಿಗೆ ತಲುಪಿಸಿದ್ದಾರೆ.</p><p>‘ಈ ಕ್ರಾಂತಿಕಾರಿ ಚಿಂತನೆ’ಗಳು ಒಳಗೊಂಡ ವಚನಗಳು ಮೊದಲಿಗೆ ತಾಳೆಗರಿಯ ಕಟ್ಟುಗಳಲ್ಲಿ ದಕ್ಕಿದವು. ಬಳಿಕ ಅವು ಪುಸಕ್ತಗಳ ರೂಪದಲ್ಲಿ ಪ್ರಸಾರಗೊಂಡವು. ಕನ್ನಡದಿಂದ ಹಲವು ಭಾರತೀಯ ಭಾಷೆಗಳಿಗೂ ದಕ್ಕಿವೆ. ಈ ವಚನ ಸಾಹಿತ್ಯವನ್ನು ಸದ್ದಿಲ್ಲದೇ ಪಸರಿಸುವ ಕಾರ್ಯದಲ್ಲಿ ಕಲಬುರಗಿ ಬಸವ ಸಮಿತಿ ಮತ್ತು ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ತೊಡಗಿವೆ.</p><p>ವಿಶ್ವನಾಥ ರೆಡ್ಡಿ ಮುದ್ನಾಳ ಅವರ ನೇತೃತ್ವದಲ್ಲಿ 2002ರ ಅಕ್ಟೋಬರ್ನಲ್ಲಿ ಕಲಬುರಗಿ ಬಸವ ಸಮಿತಿಯು ಅಧಿಕೃತವಾಗಿ ಶುರುವಾಗಿತ್ತು. ಇದೀಗ ಅದನ್ನು ವಿಲಾಸವತಿ ಖೂಬಾ ಅವರನ್ನು ಮುನ್ನಡೆಸುತ್ತಿದ್ದಾರೆ. ವರ್ಷವಿಡೀ ವಚನ ಸಾಹಿತ್ಯ ಪೊರೆಯುವ, ಪಸರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಕಲಬುರಗಿಯ ಜಯನಗರದಲ್ಲಿರುವ ಅನುಭವ ಮಂಟಪವನ್ನು ‘ವಚನಗಳ ಮಂಥನ’ದ ತಾಣವಾಗಿಸಿದ್ದಾರೆ.</p><h2>ವಿದೇಶಿ ಭಾಷೆಗಳಿಗೆ ಅನುವಾದ</h2><h2></h2><p>ಕಲಬುರಗಿ ಬಸವ ಸಮಿತಿಯು ಒಂದೆಡೆ ಪ್ರತಿಭಾನುವಾರವೂ ‘ಅರಿವಿನ ಮನೆ’ ಎಂಬ ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿ ಶರಣಪ್ರಜ್ಞೆಯನ್ನು ಪ್ರಚುರಪಡಿಸುತ್ತಿದೆ. ಇನ್ನೊಂದೆಡೆ ಕನ್ನಡದಲ್ಲಿರುವ ವಚನ ಸಾಹಿತ್ಯದ ಬೆಳಕನ್ನು ವಿದೇಶಗಳಿಗೆ ಪಸರಿಸುವ ಕೆಲಸವೂ ಮಾಡುತ್ತಿದೆ. ಇದಕ್ಕಾಗಿ ಡಾ.ಬಿ.ಡಿ.ಜತ್ತಿ ಅಧ್ಯಯನ ಕೇಂದ್ರ, ಬಸವ ಸಮಿತಿ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಬಸವಪೀಠವು ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿವೆ. ಈ ಯೋಜನೆಯಡಿ ಬಸವಾದಿ ಶರಣರ ಆಯ್ದ 2,500 ವಚನಗಳನ್ನು ಸ್ಪ್ಯಾನಿಶ್, ಜರ್ಮನ್ ಹಾಗೂ ಜಾಪನೀಸ್ ಭಾಷೆಗಳಿಗೆ ವಚನಗಳನ್ನು ಅನುವಾದಿಸಲಾಗಿದೆ. ಇನ್ನಷ್ಟೇ ಈ ಕೃತಿಗಳು ಬಿಡುಗಡೆ ಆಗಬೇಕಿದೆ.</p><p><br>ಕರ್ನಾಟಕ ಕೇಂದ್ರೀಯ ವಿವಿಯ ಸಂಪನ್ಮೂಲ ವ್ಯಕ್ತಿಗಳಾದ ಪಿಯಾಲಿ ರಾಯ್ ಅವರು ಜಾಪನೀಸ್ ಭಾಷೆಗೆ, ಶಿವಂ ಮಿಶ್ರಾ ಅವರು ಜರ್ಮನ್ ಭಾಷೆಗೆ ಹಾಗೂ ಪಿ.ಕುಮಾರ ಮಂಗಲಂ ಅವರು ಸ್ಪ್ಯಾನೀಶ್ ಭಾಷೆಗೆ ವಚನಗಳನ್ನು ಅನುವಾದಿಸುವ ಕೆಲಸ ಮಾಡಿದ್ದಾರೆ. ಇದಕ್ಕೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸುಧಾ ಶ್ರೀಧರ ಜಾಪನೀಸ್ ಭಾಷೆಯ ಅನುವಾದಕ್ಕೆ ಹಾಗೂ ಭಾನುಮೂರ್ತಿ ಅವರು ಜರ್ಮನ್ ಭಾಷೆಯ ಅನುವಾದಕ್ಕೆ ನೆರವಾಗಿದ್ದಾರೆ. ಈ ಅನುವಾದ ಕಾರ್ಯಕ್ಕೆ ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಸಿಯುಕೆ ಪ್ರಾಧ್ಯಾಪಕ ವಿಕ್ರಮ ವಿಸಾಜಿ, ವೀರಣ್ಣ ದಂಡೆ, ಜಯಶ್ರೀ ದಂಡೆ, ಸಿದ್ಧಣ್ಣ ಲಂಗೋಟಿ, ಕಲ್ಯಾಣಮ್ಮ ಲಂಗೋಟಿ, ಪ್ರೊ.ಬಸವರಾಜ ಡೋಣೂರ ಅವರೆಲ್ಲ ಕೈಜೋಡಿಸಿದ್ದಾರೆ. ಕೇಂದ್ರೀಯ ವಿವಿ ಬಸವಪೀಠದ ಸಂಯೋಜಕ ಪ್ರೊ.ಗಣಪತಿ ಸಿನ್ನೂರ ಅವರು ‘ಅನುವಾದ ಯೋಜನೆ’ಯ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ.</p><h2>ವರ್ಷವಿಡೀ ಬಸವ ಧ್ಯಾನ</h2><p>ಕಲಬುರಗಿ ಬಸವ ಸಮಿತಿಯು 2003ರ ಜನವರಿ 5ರಿಂದ ಪ್ರತಿವಾರವೂ ದತ್ತಿ ಉಪನ್ಯಾಸಗಳನ್ನು ನಡೆಸುತ್ತಿದೆ. ಅದಕ್ಕೆ ಅರಿವಿನ ಮನೆ ಕಾರ್ಯಕ್ರಮ ಎಂದು ಹೆಸರಿಟ್ಟಿದೆ. ಈ ಈತನಕ 896 ಅರಿವಿನ ಮನೆ ಕಾರ್ಯಕ್ರಮಗಳು ನಡೆದಿವೆ. ಈ ಮೂಲಕ ಬಸವಾದಿ ಪ್ರಮಥರ ವಚನಗಳ ಸಾರ ಬಿತ್ತರಿಸುವ ಕೆಲಸ ಮಾಡುತ್ತಿದೆ.</p><p>ಕೋವಿಡೋತ್ತರ ಕಾಲಘಟ್ಟದಲ್ಲಿ ಬಸವ ಸಮಿತಿಯು ‘ಅರವಿನಿ ಮನೆ’ ಕಾರ್ಯಕ್ರಮ ಜನರಿಗೆ ತಲುಪಿಸಲು ಯೂಟ್ಯೂಬ್ ಅನ್ನು ಕೂಡ ವೇದಿಕೆ ಮಾಡಿಕೊಂಡಿದೆ. ಈ ಮೂಲಕ ದೇಶ–ವಿದೇಶದಲ್ಲಿರುವ ಸಾವಿರಾರು ಬಸವಾಭಿಮಾನಿಗಳ ಮನೆ–ಮನಗಳನ್ನು ಬಸವ ಸಮಿತಿ ತಲುಪುತ್ತಿದೆ. ಸದ್ಯ 48 ದತ್ತಿಗಳು ಸಕ್ರಿಯವಾಗಿದ್ದು, ಮಿಕ್ಕ ದತ್ತಿಗಳನ್ನು ಕಲಬುರಗಿ ಬಸವ ಸಮಿತಿಯೇ ನಿರ್ವಹಿಸುತ್ತದೆ.</p><p>ಇದಲ್ಲದೇ, ಜನವರಿಯಲ್ಲಿ ‘ವಚನ ಸಂಕ್ರಾಂತಿ’ ಕಾರ್ಯಕ್ರಮ ನಡೆಸುವ ಬಸವ ಸಮಿತಿಯು ಹಿರಿಯ ಸಂಗೀತ ಕಲಾವಿದರನ್ನು ಗುರುತಿಸಿ ‘ಡಾ.ಬಿ.ಡಿ.ಜತ್ತಿ ವಚನ ಸಂಗೀತ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಜೂನ್ ತಿಂಗಳಲ್ಲಿ ಮಹಾದೇವಿ ಅಕ್ಕಗಳ ನಾಲ್ಕು ದಿನಗಳ ಸಮ್ಮೇಳನ ನಡೆಸುತ್ತದೆ. ಸಾಧಕರೊಬ್ಬರನ್ನು ಗುರುತಿಸಿ ‘ಡಾ.ಬಿ.ಡಿ.ಜತ್ತಿ ವೈರಾಗ್ಯ ನಿಧಿ’ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಇನ್ನು, ಆಷಾಢ ಮಾಸದಲ್ಲಿ ಒಂದು ತಿಂಗಳ ಕಾಲ ‘ವಚನ ಆಷಾಢ’ ಪ್ರವಚನ ನಡೆಸುವ ಮೂಲಕ ಶರಣ ತತ್ವಗಳ ಮೇಲೆ ಬೆಳಕು ಚೆಲ್ಲುತ್ತದೆ.</p><h2>6 ಪಿಎಚ್.ಡಿ, 3 ಎಂ.ಫಿಲ್ ಪ್ರದಾನ</h2><p>ಕಲಬುರಗಿ ಬಸವ ಸಮಿತಿಯ ಭಾಗವಾಗಿರುವ ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರಕ್ಕೆ ಸಂಶೋಧನಾ ಚಟುವಟಿಕೆ ನಡೆಸಲು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮಾನ್ಯತೆ ನೀಡಿದೆ. ಈಗಾಗಲೇ ಆರು ಮಂದಿಗೆ ಪಿಎಚ್.ಡಿ ಹಾಗೂ ಮೂವರಿಗೆ ಎಂ.ಫಿಲ್ ಪದವಿ ಪ್ರದಾನ ಮಾಡಲಾಗಿದೆ. ಸದ್ಯ 13 ವಿದ್ಯಾರ್ಥಿಗಳು ಪಿಎಚ್.ಡಿ ಪದವಿಗೆ ನೋಂದಾಯಿಸಿಕೊಂಡು ಸಂಶೋಧನೆಯಲ್ಲಿ ತೊಡಗಿದ್ದಾರೆ. ಡಾ.ಬಿ.ಡಿ.ಜತ್ತಿ ಕೇಂದ್ರವು ಎಂಟು ಸಾವಿರಕ್ಕೂ ಅಧಿಕ ಪುಸ್ತಕಗಳ ಸಂಶೋಧನಾ ಗ್ರಂಥಾಲಯವನ್ನು ಹೊಂದಿರುವುದು ವಿಶೇಷ.</p><p><strong>‘ಜಾಗತಿಕ ಲೋಕಕ್ಕೆ ವಚನಗಳ ಬೆಳಕು’</strong></p><p>ಒಂದೆಡೆ, ವಚನ ಸಾಹಿತ್ಯವನ್ನು ವಿದೇಶಿ ಭಾಷೆಗಳಿಗೆ ಅನುವಾದಿಸಿ ಪುಸ್ತಕಗಳ ರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಮತ್ತೊಂದೆಡೆ. ಆ ವಚನ ಸಾಹಿತ್ಯಕ್ಕೆ ‘ಕಾವ್ಯಾತ್ಮಕ ನಿರೂಪಣೆ’ ಸ್ಪರ್ಶ ನೀಡುವ ಕೆಲಸವೂ ಸಾಗಿದೆ. ಈಗಾಗಲೇ 400ಕ್ಕೂ ಅಧಿಕ ಬಸವಣ್ಣನವರ ವಚನಗಳನ್ನು ಕೃತಕ ಬುದ್ಧಿಮತ್ತೆ ಸಹಕಾರ ಪಡೆದು ‘ಸೌಂಡ್ಸ್ ಆಫ್ ಬಸವ ಡಾಟ್ ಇನ್’ (https://soundsofbasava.in/) ವೆಬ್ಸೈಟ್ನಲ್ಲಿ ಅಳವಡಿಸಲಾಗಿದೆ.</p>. <p>ಎಐ ನೆರವಿನಿಂದ ಬಸವಣ್ಣವರ ಒಂದೇ ವಚನವನ್ನು ಬರೀ ಭಾರತೀಯ ಭಾಷೆಗಳಲ್ಲದೇ 100ಕ್ಕೂ ಅಧಿಕ ವಿದೇಶಿ ಭಾಷೆಗಳಲ್ಲೂ ಓದುವಂತೆ, ಅವುಗಳ ಪ್ರತಿ ಸಾಲು, ಪ್ರತಿ ಪದಗಳ ಅರ್ಥ, ಭಾವ, ದಕ್ಕುವಂತೆ ರೂಪಿಸಲಾಗಿದೆ. ಜೊತೆಗೆ ಈಗಿನ ಸನ್ನಿವೇಶ, ಸಂದರ್ಭಕ್ಕೆ ಎಷ್ಟು ಪೂರಕ ಎಂಬುದನ್ನೂ ವಿವರಿಸುವ ಪ್ರಯತ್ನವೂ ಅದರಲ್ಲಿ ಅಂತರ್ಗತಗೊಳಿಸಲಾಗಿದೆ.</p><p>‘ಬಸವಣ್ಣ ಹೇಳಿದ್ದ ವಚನಗಳು ಪುಸಕ್ತದಲ್ಲಿ ಅಲಂಕರಿಸಲು ಅಲ್ಲ. ಬಸವಾದಿ ಶರಣರ ವಚನಗಳು ಶಾಯಿ ಹಾಗೂ ಕಾಗದದಿಂದ ಹುಟ್ಟಿದ್ದಲ್ಲ; ಅವು ಅನುಭವ ಜನ್ಯ. ವಚನಗಳು ಬದುಕಿನ ಪರಿವರ್ತನೆಯ ಮಂತ್ರಗಳು. ಅಂಥ ವಚನಗಳನ್ನು ಬಹುಭಾಷೆಯ ಓದುಗರಿಗೆ ತಲುಪಿಸಲು ತಂತ್ರಜ್ಞಾನದ ನೆರವು ಪಡೆದು ವೆಬ್ಸೈಟ್ ರೂಪಿಸಲಾಗಿದೆ. ಜಗತ್ತಿಗೆ ಯಾವುದೇ ಭಾಷೆಯಲ್ಲಿ ವಚನಗಳನ್ನು ಓದಬಹುದು, ಅರ್ಥ ತಿಳಿದುಕೊಳ್ಳಬಹುದು. ವಚನಗಳನ್ನು ಹಾಡಿನ ರೂಪದಲ್ಲೂ ಕೇಳಬಹುದು’ ಎನ್ನುತ್ತಾರೆ ‘ಸೌಂಡ್ಸ್ ಆಫ್ ಬಸವ ಡಾಟ್ ಇನ್’ ವೆಬ್ಸೈಟ್ ರೂಪಿಸಿದ ರಾಜೇಂದ್ರ ಖೂಬಾ.</p><p>‘ನಾವೆಲ್ಲ 2008ರಲ್ಲಿ ಎಂ.ಎಂ.ಕಲಬುರ್ಗಿ ನೇತೃತ್ವದಲ್ಲಿ ಬಹುಭಾಷಾ ವಚನ ಅನುವಾದದ ಯೋಜನೆ ಆರಂಭಿಸಿದ್ದೆವು. ಅಲ್ಲಿಂದ ಈತನಕ 2,500 ವಚನಗಳನ್ನು 40 ಭಾಷೆಗಳಿಗೆ ಅನುವಾದಿಸಲಾಗಿದೆ. ಅದುವೇ ದೊಡ್ಡ ಕೆಲಸ ಎಂದು ಭಾವಿಸಿದ್ದೆ. ಆದರೆ, ರಾಜೇಂದ್ರ ಖೂಬಾ ಹಾಗೂ ಮತ್ತವರ ತಂಡವು ಎಐ ಸೇರಿದಂತೆ ತಂತ್ರಜ್ಞಾನ ಸದ್ಬಳಕೆ ಮಾಡಿ ವಚನಗಳನ್ನು ಅಲೌಕಿಕ ಭಾವನೆಯಲ್ಲಿ ವಿಕಾಸಗೊಳಿಸಿ ಏಕಕಾಲಕ್ಕೆ ಬಹುಭಾಷೆಯಲ್ಲಿ ನೀಡುವ ಕೆಲಸ ಮಾಡಿದೆ. ಪ್ರತಿ ಸಾಲಿನ ವಿಶ್ಲೇಷಣೆಯಷ್ಟೇ ಅಲ್ಲದೇ ವಚನಗಳ ಕಾವ್ಯಮಯ ಸ್ವರೂಪವನ್ನೂ ಕೊಡಲು ಪ್ರಯತ್ನಿಸಿದ್ದಾರೆ. ಇದು ಆನುಭಾವಿಕ ಲೋಕ ತಲುಪಿದರೆ, ಜಗತ್ತಿನೆಲ್ಲಡೆ ಬಸವಣ್ಣ ವ್ಯಾಪಿಸುತ್ತಾರೆ’ ಎಂದು ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಗಮನಾರ್ಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,<br>ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,<br>ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ<br>ಇದೇ ಅಂತರಂಗಶುದ್ಧಿ, ಇದೇ ಬಹಿರಂಗ ಶುದ್ಧಿ<br>ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ...</p><p>ಇವು ಜಗಜ್ಯೋತಿ ಬಸವಣ್ಣವರ ವಚನವೊಂದರ ಸಾಲುಗಳು. ಈ ಸಪ್ತ ಸೂತ್ರಗಳು ಮನುಜರೆಲ್ಲರ ಬದುಕಿಗೂ ದಾರಿದೀವಿಗೆಯೇ ಸರಿ. ಇವುಗಳನ್ನು ಅಳವಡಿಸಿಕೊಂಡರೆ ಬದುಕು ಬೆಳಕು ಕಾಣುತ್ತದೆ.</p><p>ಈಗ್ಗೆ 900 ವರ್ಷಗಳ ಹಿಂದೆ 12ನೇ ಶತಮಾನದಲ್ಲಿ ಬಸವಣ್ಣ ಹಾಗೂ ಬಸವಾದಿ ಪ್ರಮಥರು ಸಮಾನತೆ, ಅರಿವು, ದಾಸೋಹ, ಕಾಯಕ ಸೇರಿದಂತೆ ಹತ್ತಾರು ಕ್ಷೇತ್ರಗಳ ಬಗೆಗೆ ಸಾವಿರ–ಸಾವಿರ ಸಂಖ್ಯೆಯಲ್ಲಿ ಅನುಭವ ಜನ್ಯವಾದ ವಚನಗಳನ್ನು ನೀಡಿದ್ದಾರೆ. ‘ಶ್ರೇಷ್ಠ ಬದುಕಿನ ವಿಧಾನ’ವನ್ನು ಸರಳಗನ್ನಡದಲ್ಲಿ ಶ್ರೀಸಾಮಾನ್ಯರಿಗೆ ತಲುಪಿಸಿದ್ದಾರೆ.</p><p>‘ಈ ಕ್ರಾಂತಿಕಾರಿ ಚಿಂತನೆ’ಗಳು ಒಳಗೊಂಡ ವಚನಗಳು ಮೊದಲಿಗೆ ತಾಳೆಗರಿಯ ಕಟ್ಟುಗಳಲ್ಲಿ ದಕ್ಕಿದವು. ಬಳಿಕ ಅವು ಪುಸಕ್ತಗಳ ರೂಪದಲ್ಲಿ ಪ್ರಸಾರಗೊಂಡವು. ಕನ್ನಡದಿಂದ ಹಲವು ಭಾರತೀಯ ಭಾಷೆಗಳಿಗೂ ದಕ್ಕಿವೆ. ಈ ವಚನ ಸಾಹಿತ್ಯವನ್ನು ಸದ್ದಿಲ್ಲದೇ ಪಸರಿಸುವ ಕಾರ್ಯದಲ್ಲಿ ಕಲಬುರಗಿ ಬಸವ ಸಮಿತಿ ಮತ್ತು ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ತೊಡಗಿವೆ.</p><p>ವಿಶ್ವನಾಥ ರೆಡ್ಡಿ ಮುದ್ನಾಳ ಅವರ ನೇತೃತ್ವದಲ್ಲಿ 2002ರ ಅಕ್ಟೋಬರ್ನಲ್ಲಿ ಕಲಬುರಗಿ ಬಸವ ಸಮಿತಿಯು ಅಧಿಕೃತವಾಗಿ ಶುರುವಾಗಿತ್ತು. ಇದೀಗ ಅದನ್ನು ವಿಲಾಸವತಿ ಖೂಬಾ ಅವರನ್ನು ಮುನ್ನಡೆಸುತ್ತಿದ್ದಾರೆ. ವರ್ಷವಿಡೀ ವಚನ ಸಾಹಿತ್ಯ ಪೊರೆಯುವ, ಪಸರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಕಲಬುರಗಿಯ ಜಯನಗರದಲ್ಲಿರುವ ಅನುಭವ ಮಂಟಪವನ್ನು ‘ವಚನಗಳ ಮಂಥನ’ದ ತಾಣವಾಗಿಸಿದ್ದಾರೆ.</p><h2>ವಿದೇಶಿ ಭಾಷೆಗಳಿಗೆ ಅನುವಾದ</h2><h2></h2><p>ಕಲಬುರಗಿ ಬಸವ ಸಮಿತಿಯು ಒಂದೆಡೆ ಪ್ರತಿಭಾನುವಾರವೂ ‘ಅರಿವಿನ ಮನೆ’ ಎಂಬ ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿ ಶರಣಪ್ರಜ್ಞೆಯನ್ನು ಪ್ರಚುರಪಡಿಸುತ್ತಿದೆ. ಇನ್ನೊಂದೆಡೆ ಕನ್ನಡದಲ್ಲಿರುವ ವಚನ ಸಾಹಿತ್ಯದ ಬೆಳಕನ್ನು ವಿದೇಶಗಳಿಗೆ ಪಸರಿಸುವ ಕೆಲಸವೂ ಮಾಡುತ್ತಿದೆ. ಇದಕ್ಕಾಗಿ ಡಾ.ಬಿ.ಡಿ.ಜತ್ತಿ ಅಧ್ಯಯನ ಕೇಂದ್ರ, ಬಸವ ಸಮಿತಿ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಬಸವಪೀಠವು ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿವೆ. ಈ ಯೋಜನೆಯಡಿ ಬಸವಾದಿ ಶರಣರ ಆಯ್ದ 2,500 ವಚನಗಳನ್ನು ಸ್ಪ್ಯಾನಿಶ್, ಜರ್ಮನ್ ಹಾಗೂ ಜಾಪನೀಸ್ ಭಾಷೆಗಳಿಗೆ ವಚನಗಳನ್ನು ಅನುವಾದಿಸಲಾಗಿದೆ. ಇನ್ನಷ್ಟೇ ಈ ಕೃತಿಗಳು ಬಿಡುಗಡೆ ಆಗಬೇಕಿದೆ.</p><p><br>ಕರ್ನಾಟಕ ಕೇಂದ್ರೀಯ ವಿವಿಯ ಸಂಪನ್ಮೂಲ ವ್ಯಕ್ತಿಗಳಾದ ಪಿಯಾಲಿ ರಾಯ್ ಅವರು ಜಾಪನೀಸ್ ಭಾಷೆಗೆ, ಶಿವಂ ಮಿಶ್ರಾ ಅವರು ಜರ್ಮನ್ ಭಾಷೆಗೆ ಹಾಗೂ ಪಿ.ಕುಮಾರ ಮಂಗಲಂ ಅವರು ಸ್ಪ್ಯಾನೀಶ್ ಭಾಷೆಗೆ ವಚನಗಳನ್ನು ಅನುವಾದಿಸುವ ಕೆಲಸ ಮಾಡಿದ್ದಾರೆ. ಇದಕ್ಕೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸುಧಾ ಶ್ರೀಧರ ಜಾಪನೀಸ್ ಭಾಷೆಯ ಅನುವಾದಕ್ಕೆ ಹಾಗೂ ಭಾನುಮೂರ್ತಿ ಅವರು ಜರ್ಮನ್ ಭಾಷೆಯ ಅನುವಾದಕ್ಕೆ ನೆರವಾಗಿದ್ದಾರೆ. ಈ ಅನುವಾದ ಕಾರ್ಯಕ್ಕೆ ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಸಿಯುಕೆ ಪ್ರಾಧ್ಯಾಪಕ ವಿಕ್ರಮ ವಿಸಾಜಿ, ವೀರಣ್ಣ ದಂಡೆ, ಜಯಶ್ರೀ ದಂಡೆ, ಸಿದ್ಧಣ್ಣ ಲಂಗೋಟಿ, ಕಲ್ಯಾಣಮ್ಮ ಲಂಗೋಟಿ, ಪ್ರೊ.ಬಸವರಾಜ ಡೋಣೂರ ಅವರೆಲ್ಲ ಕೈಜೋಡಿಸಿದ್ದಾರೆ. ಕೇಂದ್ರೀಯ ವಿವಿ ಬಸವಪೀಠದ ಸಂಯೋಜಕ ಪ್ರೊ.ಗಣಪತಿ ಸಿನ್ನೂರ ಅವರು ‘ಅನುವಾದ ಯೋಜನೆ’ಯ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ.</p><h2>ವರ್ಷವಿಡೀ ಬಸವ ಧ್ಯಾನ</h2><p>ಕಲಬುರಗಿ ಬಸವ ಸಮಿತಿಯು 2003ರ ಜನವರಿ 5ರಿಂದ ಪ್ರತಿವಾರವೂ ದತ್ತಿ ಉಪನ್ಯಾಸಗಳನ್ನು ನಡೆಸುತ್ತಿದೆ. ಅದಕ್ಕೆ ಅರಿವಿನ ಮನೆ ಕಾರ್ಯಕ್ರಮ ಎಂದು ಹೆಸರಿಟ್ಟಿದೆ. ಈ ಈತನಕ 896 ಅರಿವಿನ ಮನೆ ಕಾರ್ಯಕ್ರಮಗಳು ನಡೆದಿವೆ. ಈ ಮೂಲಕ ಬಸವಾದಿ ಪ್ರಮಥರ ವಚನಗಳ ಸಾರ ಬಿತ್ತರಿಸುವ ಕೆಲಸ ಮಾಡುತ್ತಿದೆ.</p><p>ಕೋವಿಡೋತ್ತರ ಕಾಲಘಟ್ಟದಲ್ಲಿ ಬಸವ ಸಮಿತಿಯು ‘ಅರವಿನಿ ಮನೆ’ ಕಾರ್ಯಕ್ರಮ ಜನರಿಗೆ ತಲುಪಿಸಲು ಯೂಟ್ಯೂಬ್ ಅನ್ನು ಕೂಡ ವೇದಿಕೆ ಮಾಡಿಕೊಂಡಿದೆ. ಈ ಮೂಲಕ ದೇಶ–ವಿದೇಶದಲ್ಲಿರುವ ಸಾವಿರಾರು ಬಸವಾಭಿಮಾನಿಗಳ ಮನೆ–ಮನಗಳನ್ನು ಬಸವ ಸಮಿತಿ ತಲುಪುತ್ತಿದೆ. ಸದ್ಯ 48 ದತ್ತಿಗಳು ಸಕ್ರಿಯವಾಗಿದ್ದು, ಮಿಕ್ಕ ದತ್ತಿಗಳನ್ನು ಕಲಬುರಗಿ ಬಸವ ಸಮಿತಿಯೇ ನಿರ್ವಹಿಸುತ್ತದೆ.</p><p>ಇದಲ್ಲದೇ, ಜನವರಿಯಲ್ಲಿ ‘ವಚನ ಸಂಕ್ರಾಂತಿ’ ಕಾರ್ಯಕ್ರಮ ನಡೆಸುವ ಬಸವ ಸಮಿತಿಯು ಹಿರಿಯ ಸಂಗೀತ ಕಲಾವಿದರನ್ನು ಗುರುತಿಸಿ ‘ಡಾ.ಬಿ.ಡಿ.ಜತ್ತಿ ವಚನ ಸಂಗೀತ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಜೂನ್ ತಿಂಗಳಲ್ಲಿ ಮಹಾದೇವಿ ಅಕ್ಕಗಳ ನಾಲ್ಕು ದಿನಗಳ ಸಮ್ಮೇಳನ ನಡೆಸುತ್ತದೆ. ಸಾಧಕರೊಬ್ಬರನ್ನು ಗುರುತಿಸಿ ‘ಡಾ.ಬಿ.ಡಿ.ಜತ್ತಿ ವೈರಾಗ್ಯ ನಿಧಿ’ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಇನ್ನು, ಆಷಾಢ ಮಾಸದಲ್ಲಿ ಒಂದು ತಿಂಗಳ ಕಾಲ ‘ವಚನ ಆಷಾಢ’ ಪ್ರವಚನ ನಡೆಸುವ ಮೂಲಕ ಶರಣ ತತ್ವಗಳ ಮೇಲೆ ಬೆಳಕು ಚೆಲ್ಲುತ್ತದೆ.</p><h2>6 ಪಿಎಚ್.ಡಿ, 3 ಎಂ.ಫಿಲ್ ಪ್ರದಾನ</h2><p>ಕಲಬುರಗಿ ಬಸವ ಸಮಿತಿಯ ಭಾಗವಾಗಿರುವ ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರಕ್ಕೆ ಸಂಶೋಧನಾ ಚಟುವಟಿಕೆ ನಡೆಸಲು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮಾನ್ಯತೆ ನೀಡಿದೆ. ಈಗಾಗಲೇ ಆರು ಮಂದಿಗೆ ಪಿಎಚ್.ಡಿ ಹಾಗೂ ಮೂವರಿಗೆ ಎಂ.ಫಿಲ್ ಪದವಿ ಪ್ರದಾನ ಮಾಡಲಾಗಿದೆ. ಸದ್ಯ 13 ವಿದ್ಯಾರ್ಥಿಗಳು ಪಿಎಚ್.ಡಿ ಪದವಿಗೆ ನೋಂದಾಯಿಸಿಕೊಂಡು ಸಂಶೋಧನೆಯಲ್ಲಿ ತೊಡಗಿದ್ದಾರೆ. ಡಾ.ಬಿ.ಡಿ.ಜತ್ತಿ ಕೇಂದ್ರವು ಎಂಟು ಸಾವಿರಕ್ಕೂ ಅಧಿಕ ಪುಸ್ತಕಗಳ ಸಂಶೋಧನಾ ಗ್ರಂಥಾಲಯವನ್ನು ಹೊಂದಿರುವುದು ವಿಶೇಷ.</p><p><strong>‘ಜಾಗತಿಕ ಲೋಕಕ್ಕೆ ವಚನಗಳ ಬೆಳಕು’</strong></p><p>ಒಂದೆಡೆ, ವಚನ ಸಾಹಿತ್ಯವನ್ನು ವಿದೇಶಿ ಭಾಷೆಗಳಿಗೆ ಅನುವಾದಿಸಿ ಪುಸ್ತಕಗಳ ರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಮತ್ತೊಂದೆಡೆ. ಆ ವಚನ ಸಾಹಿತ್ಯಕ್ಕೆ ‘ಕಾವ್ಯಾತ್ಮಕ ನಿರೂಪಣೆ’ ಸ್ಪರ್ಶ ನೀಡುವ ಕೆಲಸವೂ ಸಾಗಿದೆ. ಈಗಾಗಲೇ 400ಕ್ಕೂ ಅಧಿಕ ಬಸವಣ್ಣನವರ ವಚನಗಳನ್ನು ಕೃತಕ ಬುದ್ಧಿಮತ್ತೆ ಸಹಕಾರ ಪಡೆದು ‘ಸೌಂಡ್ಸ್ ಆಫ್ ಬಸವ ಡಾಟ್ ಇನ್’ (https://soundsofbasava.in/) ವೆಬ್ಸೈಟ್ನಲ್ಲಿ ಅಳವಡಿಸಲಾಗಿದೆ.</p>. <p>ಎಐ ನೆರವಿನಿಂದ ಬಸವಣ್ಣವರ ಒಂದೇ ವಚನವನ್ನು ಬರೀ ಭಾರತೀಯ ಭಾಷೆಗಳಲ್ಲದೇ 100ಕ್ಕೂ ಅಧಿಕ ವಿದೇಶಿ ಭಾಷೆಗಳಲ್ಲೂ ಓದುವಂತೆ, ಅವುಗಳ ಪ್ರತಿ ಸಾಲು, ಪ್ರತಿ ಪದಗಳ ಅರ್ಥ, ಭಾವ, ದಕ್ಕುವಂತೆ ರೂಪಿಸಲಾಗಿದೆ. ಜೊತೆಗೆ ಈಗಿನ ಸನ್ನಿವೇಶ, ಸಂದರ್ಭಕ್ಕೆ ಎಷ್ಟು ಪೂರಕ ಎಂಬುದನ್ನೂ ವಿವರಿಸುವ ಪ್ರಯತ್ನವೂ ಅದರಲ್ಲಿ ಅಂತರ್ಗತಗೊಳಿಸಲಾಗಿದೆ.</p><p>‘ಬಸವಣ್ಣ ಹೇಳಿದ್ದ ವಚನಗಳು ಪುಸಕ್ತದಲ್ಲಿ ಅಲಂಕರಿಸಲು ಅಲ್ಲ. ಬಸವಾದಿ ಶರಣರ ವಚನಗಳು ಶಾಯಿ ಹಾಗೂ ಕಾಗದದಿಂದ ಹುಟ್ಟಿದ್ದಲ್ಲ; ಅವು ಅನುಭವ ಜನ್ಯ. ವಚನಗಳು ಬದುಕಿನ ಪರಿವರ್ತನೆಯ ಮಂತ್ರಗಳು. ಅಂಥ ವಚನಗಳನ್ನು ಬಹುಭಾಷೆಯ ಓದುಗರಿಗೆ ತಲುಪಿಸಲು ತಂತ್ರಜ್ಞಾನದ ನೆರವು ಪಡೆದು ವೆಬ್ಸೈಟ್ ರೂಪಿಸಲಾಗಿದೆ. ಜಗತ್ತಿಗೆ ಯಾವುದೇ ಭಾಷೆಯಲ್ಲಿ ವಚನಗಳನ್ನು ಓದಬಹುದು, ಅರ್ಥ ತಿಳಿದುಕೊಳ್ಳಬಹುದು. ವಚನಗಳನ್ನು ಹಾಡಿನ ರೂಪದಲ್ಲೂ ಕೇಳಬಹುದು’ ಎನ್ನುತ್ತಾರೆ ‘ಸೌಂಡ್ಸ್ ಆಫ್ ಬಸವ ಡಾಟ್ ಇನ್’ ವೆಬ್ಸೈಟ್ ರೂಪಿಸಿದ ರಾಜೇಂದ್ರ ಖೂಬಾ.</p><p>‘ನಾವೆಲ್ಲ 2008ರಲ್ಲಿ ಎಂ.ಎಂ.ಕಲಬುರ್ಗಿ ನೇತೃತ್ವದಲ್ಲಿ ಬಹುಭಾಷಾ ವಚನ ಅನುವಾದದ ಯೋಜನೆ ಆರಂಭಿಸಿದ್ದೆವು. ಅಲ್ಲಿಂದ ಈತನಕ 2,500 ವಚನಗಳನ್ನು 40 ಭಾಷೆಗಳಿಗೆ ಅನುವಾದಿಸಲಾಗಿದೆ. ಅದುವೇ ದೊಡ್ಡ ಕೆಲಸ ಎಂದು ಭಾವಿಸಿದ್ದೆ. ಆದರೆ, ರಾಜೇಂದ್ರ ಖೂಬಾ ಹಾಗೂ ಮತ್ತವರ ತಂಡವು ಎಐ ಸೇರಿದಂತೆ ತಂತ್ರಜ್ಞಾನ ಸದ್ಬಳಕೆ ಮಾಡಿ ವಚನಗಳನ್ನು ಅಲೌಕಿಕ ಭಾವನೆಯಲ್ಲಿ ವಿಕಾಸಗೊಳಿಸಿ ಏಕಕಾಲಕ್ಕೆ ಬಹುಭಾಷೆಯಲ್ಲಿ ನೀಡುವ ಕೆಲಸ ಮಾಡಿದೆ. ಪ್ರತಿ ಸಾಲಿನ ವಿಶ್ಲೇಷಣೆಯಷ್ಟೇ ಅಲ್ಲದೇ ವಚನಗಳ ಕಾವ್ಯಮಯ ಸ್ವರೂಪವನ್ನೂ ಕೊಡಲು ಪ್ರಯತ್ನಿಸಿದ್ದಾರೆ. ಇದು ಆನುಭಾವಿಕ ಲೋಕ ತಲುಪಿದರೆ, ಜಗತ್ತಿನೆಲ್ಲಡೆ ಬಸವಣ್ಣ ವ್ಯಾಪಿಸುತ್ತಾರೆ’ ಎಂದು ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಗಮನಾರ್ಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>