ಈ ಯೋಜನೆಯ ನಿರ್ವಹಣೆಗೆ ಅನುದಾನ ಹಾಗೂ ರೈತರಿಗೆ ಭೂ ಪರಿಹಾರ ಕೋರಿ ಹಲವು ಬಾರಿ ಸದನದಲ್ಲಿ ಗಮನ ಸೆಳೆದಿರುವೆ. ಕಾಲುವೆ ದುರಸ್ತಿಗೆ ನೀಡಿರುವ ₹5 ಕೋಟಿ ಯಾತಕ್ಕೂ ಸಾಲುವುದಿಲ್ಲ. ರೈತರೊಂದಿಗೆ ಸೇರಿ ಹೋರಾಟ ಮಾಡುವೆ.
– ಕೃಷ್ಣನಾಯ್ಕ, ಶಾಸಕ, ಹೂವಿನಹಡಗಲಿ
ಅನುದಾನ ಕೊರತೆಯಿಂದ ನಿರ್ವಹಣೆ ಸಮಸ್ಯೆಯಾಗಿದೆ. ಈ ಬಾರಿ ಪೂರ್ಣ ಅಚ್ಚುಕಟ್ಟಿಗೆ ನೀರು ಹರಿಸಲು ಯೋಜನೆ ಹಾಕಿಕೊಂಡಿದ್ದೇವೆ.
– ಶಿವಮೂರ್ತಿ, ಕಾರ್ಯನಿರ್ವಾಹಕ ಎಂಜಿನಿಯರ್, ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಭಾಗ, ಹಡಗಲಿ
ಕಾಲುವೆಗಳ ದುರಸ್ತಿ ಹಾಗೂ ಆಧುನೀಕರಣಕ್ಕಾಗಿ ಸರ್ಕಾರಕ್ಕೆ ₹38 ಕೋಟಿಯ ಪ್ರಸ್ತಾವ ಸಲ್ಲಿಸಲಾಗಿತ್ತು. ₹5 ಕೋಟಿ ಬಿಡುಗಡೆಯಾಗಿದ್ದು, ಮುಖ್ಯ ಕಾಲುವೆಗಳ ದುರಸ್ತಿ ಮಾಡಿಸುತ್ತೇವೆ.
– ರಾಘವೇಂದ್ರ ಎಚ್.ಸಿ., ಎಇಇ, ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಭಾಗ, ಹಡಗಲಿ
ಹೂವಿನಹಡಗಲಿ ತಾಲ್ಲೂಕನ್ನು ಸಂಪೂರ್ಣ ನೀರಾವರಿಯಾಗಿರುವ ಕನಸಿನೊಂದಿಗೆ ಎಂ.ಪಿ.ಪ್ರಕಾಶ್ ಈ ಯೋಜನೆ ರೂಪಿಸಿದ್ದರು. ಆದರೆ, ನಿರ್ವಹಣೆ ಕೊರತೆಯಿಂದ ಕೊನೆಯ ಭಾಗದ ರೈತರು ಇನ್ನೂ ನೀರು ಕಂಡಿಲ್ಲ. ಚುನಾವಣೆಯಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಈ ಯೋಜನೆ ನೆನಪಾಗುತ್ತದೆ.
– ಎಲ್.ಸೋಮಿನಾಯ್ಕ, ರೈತ ದಾಸರಹಳ್ಳಿ ತಾಂಡ
ಯೋಜನೆ ಚಾಲನೆಗೊಂಡು ಒಂದೂವರೆ ದಶಕ ಕಳೆದರೂ ಪೂರ್ಣ ಅಚ್ಚುಕಟ್ಟಿಗೆ ನೀರು ಹರಿದಿಲ್ಲ. ಅಡೆತಡೆಗಳನ್ನು ನಿವಾರಿಸಿ ಇಡೀ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ರೈತರಿಗೆ ತಕ್ಷಣ ಭೂ ಪರಿಹಾರ ನೀಡಬೇಕು.