ಚನ್ನಪಟ್ಟಣ: ತಾಲ್ಲೂಕಿನಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ಶ್ಯಾನುಭೋಗನಹಳ್ಳಿ ಹಾಗೂ ಕಾರೆಕೊಪ್ಪ ಗ್ರಾಮಗಳಲ್ಲಿ ಗುರುವಾರ ರಾತ್ರಿ ಕಾಡಾನೆಗಳು ದಾಳಿ ಮಾಡಿ ರೈತರ ಬೆಳೆ ನಾಶಪಡಿಸಿವೆ.
ಗ್ರಾಮದ ರಘು ಎಂಬುವರ 2ಎಕರೆ ಭತ್ತ, ರಾಗಿ ಬೆಳೆ, ತೆಂಗಿನ ಮರಗಳು, ನೀರಿನ ಪೈಪ್ಗಳು ಹಾಳಾಗಿವೆ. ಅದೇ ಗ್ರಾಮದ ತಾಯಮ್ಮ ಎಂಬುವರ 2 ಎಕರೆ ರಾಗಿ, ಕಾರೆಕೊಪ್ಪ ಗ್ರಾಮದ ಚನ್ನೇಗೌಡ ಎಂಬುವರ ಒಂದೂವರೆ ಎಕರೆ ಭತ್ತದ ಬೆಳೆ ನಾಶವಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಮೂರು ದಿನಗಳ ಹಿಂದೆ ಶ್ಯಾನುಭೋಗನಹಳ್ಳಿಯಲ್ಲಿ ನಾಲ್ಕು ಕಾಡಾನೆಗಳು ದಾಳಿ ಮಾಡಿ ರೈತರ ಬೆಳೆ ನಾಶ ಮಾಡಿದ್ದವು. ಈ ಭಾಗದಲ್ಲಿ ಸತತವಾಗಿ ಏಳೆಂಟು ವರ್ಷಗಳಿಂದ ಕಾಡಾನೆಗಳ ದಾಳಿ ಮುಂದವರಿದಿದ್ದು, ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ ಎಂಬುದು ರೈತರ ಆರೋಪ.
ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕೆಂದು ಮುಖಂಡ ಕೋಡಂಬಹಳ್ಳಿ ನಾಗರಾಜು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ಮುತ್ತುನಾಯಕ್, ಮುತ್ತುರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳೆ ನಷ್ಟ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.