ಭದ್ರಾವತಿ: ಹೆರಿಗೆ ನಂತರ ಸಾವನ್ನಪ್ಪಿದ ಮಹಿಳೆಗೆ ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡುವಲ್ಲಿ ಇಲ್ಲಿನ ನಿರ್ಮಲ ಆಸ್ಪತ್ರೆ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ನಾಗರಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬಾರಂದೂರು ಗ್ರಾಮದ ರಾಧಾಬಾಯಿ (28) ಮೃತಪಟ್ಟವರು. ಈಕೆಯ ಹೆರಿಗೆ ಆಗುವ ತನಕ ಗಮನಿಸಿದ ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕಳುಹಿಸಿ ತಮ್ಮ ಜವಾಬ್ದಾರಿ ಮರೆತಿದ್ದಾರೆ ಎಂದು ಆರೋಪಿಸಿ ನಡೆದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಆಸ್ಪತ್ರೆ ಕಿಟಿಕಿ ಗಾಜು ಒಡೆದ ಘಟನೆ ನಡೆದಿದೆ.
ಘಟನೆ ವಿವರ: ರಾಧಾಬಾಯಿ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದು, ಸಂಜೆ 7.45ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲಿನ ವೈದ್ಯರು ರಕ್ತ ಕೊರತೆ ಇದ್ದು ಇದನ್ನು ಹೊಂದಿಸುವಂತೆ ಸೂಚಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಕಾರಣ ಬೇರೆಡೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
ರಾಧಾಬಾಯಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದು, ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಇದನ್ನು ದೃಢಪಡಿಸಿಕೊಂಡ ಕುಟುಂಬಸ್ಥರು ನೇರವಾಗಿ ಶವದ ಸಮೇತ ಮಂಗಳವಾರ ಸಂಜೆ ಆಸ್ಪತ್ರೆ ಮುಂಭಾಗ ಬಂದು ಪ್ರತಿಭಟಿಸಿದ್ದಾರೆ.
ಈ ವೇಳೆ ಪ್ರತಿಭಟನೆ ವಿಕೋಪಕ್ಕೆ ತಿರುಗಿದ ಪರಿಣಾಮ ಉದ್ರಿಕ್ತ ಗ್ರಾಮಸ್ಥರು ಆಸ್ಪತ್ರೆ ಕಿಟಿಕಿ ಗಾಜು ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಪೊಲೀಸರು ಬಿಗಿ ಬಂದೋಬಸ್ತು ಒದಗಿಸುವ ಮೂಲಕ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ನಡೆಸಿದ್ದಾರೆ.