ವಿಜಯಪುರ: ‘ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ರಫ್ತು ಮಾಡಲು ಸಾಕಷ್ಟು ಅವಕಾಶವಿದ್ದು, ಮಾಹಿತಿ ಕೊರತೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ನಗರದ ರುಡ್ಸೆಟ್ ಸಂಸ್ಥೆಯಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ (ವಿಟಿಪಿಸಿ , ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ರುಡ್ಸೆಟ್ ಸಂಸ್ಥೆ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಫ್ತು ನಿರ್ವಹಣಾ ತರಬೇತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ತರಬೇತಿ ಪಡೆದ ಶಿಬಿರಾರ್ಥಿಗಳು ಸ್ವಂತ ರಫ್ತು ಉದ್ದಿಮೆ ಪ್ರಾರಂಭಿಸಿ, ಉಜ್ವಲ ಭವಿಷ್ಯ ಕಂಡುಕೊಳ್ಳಬೇಕು, ಜೊತೆಗೆ ದೇಶದ ಪ್ರಗತಿಗೆ ಕೈಜೋಡಿಸಬೇಕು’ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ, ಕೈಗಾರಿಕೆ ಮತ್ತು ಕೃಷಿ ಸಂಸ್ಥೆ ಅಧ್ಯಕ್ಷ ಡಿ.ಎಸ್.ಗುಡ್ಡೋಡಗಿ ಮಾತನಾಡಿ, ‘ಯುವ ಜನತೆ ತರಬೇತಿಯ ಲಾಭ ಪಡೆದು ಕೊಂಡು ರಫ್ತು ಉದ್ಯಮದಲ್ಲಿ ತೊಡಗಿಸಿಕೊಳ್ಳ ಬೇಕು’ ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಎಸ್.ವಿ.ಪಾಟೀಲ ಮಾತನಾಡಿ, ‘ಈ ಭಾಗದಲ್ಲಿ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳನ್ನು ಸಂಸ್ಕರಿಸಿ ಆಕರ್ಷಕ ಪ್ಯಾಕ್ನೊಂದಿಗೆ ರಫ್ತು ಮಾಡಲು ಸಾಕಷ್ಟು ಅವಕಾಶಗಳಿವೆ. ಜಿಲ್ಲೆಯಲ್ಲಿ ವಿವಿಧ ಕೃಷಿ ಉತ್ಪನ್ನಗಳನ್ನು ಬೆಳೆಸಲಾಗುತ್ತಿದ್ದು, ಈ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಲು ರಫ್ತು ಅವಶ್ಯವಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶ ಟಿ.ಸಿದ್ದಣ್ಣ ಮಾತನಾಡಿ, ‘ರಫ್ತಿಗೆ ಸರ್ಕಾರ ಅನೇಕ ಉತ್ತೇಜನ, ಸೌಲಭ್ಯಗಳನ್ನು ನೀಡುತ್ತಿದೆ. ಉತ್ಪನ್ನಗಳ ಗುಣಮಟ್ಟ, ಸಾಗಾಣಿಕೆ ವ್ಯವಸ್ಥೆ ಮತ್ತು ಕ್ರಮ ಬದ್ಧವಾದ ದಸ್ತಾವೇಜುಗಳ ನಿರ್ವಹಣೆಯ ಅವಶ್ಯಕತೆ ಇದೆ’ ಎಂದರು.
ರುಡ್ಸೆಟ್ ಸಂಸ್ಥೆ ನಿರ್ದೇಶಕ ಆರ್.ಡಿ.ಜೈನಾಪುರ, ಪಿ.ಎಸ್.ಬಿ.ಶಾಸ್ತ್ರಿ ಇದ್ದರು.