ರಾಮನಗರ: ಹವಾಮಾನ ವೈಪರೀತ್ಯದಿಂದ ಮಳೆ ಕ್ಷೀಣಿಸುತ್ತಿರುವುದರಿಂದ ನೀರಿನ ಮಟ್ಟ ಕುಸಿಯುತ್ತಿದೆ. ಅಂತರ್ಜಲವನ್ನು ಉಳಿಸಲು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು ಎಂದು ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕ ಡಾ.ಪ್ರಸನ್ನಕುಮಾರ್ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಂತರ್ಜಲ ನಿರ್ದೇಶನಾಲಯ ಮತ್ತು ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ ವತಿಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಂತರ್ಜಲ ಅಭಿವೃದ್ಧಿ, ಸದ್ಬಳಕೆ, ಸಂರಕ್ಷಣೆ, ಮಳೆ ನೀರು ಸಂಗ್ರಹಣೆ, ಮರುಬಳಕೆ, ಅಂತರ್ಜಲ ಕಲುಷಿತತೆ ತಡೆಗಟ್ಟುವಿಕೆ ಮತ್ತು ತೆರೆದ ಕೊಳವೆಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳುವ ಅವಘಡಗಳನ್ನು ನಿಯಂತ್ರಿಸುವ ಕುರಿತು ಗುರುವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಕಾಲಕ್ಕೆ ಮಳೆಯಾಗದೇ ಇರುವುದರಿಂದ ಅಂತರ್ಜಲದ ಮಟ್ಟ ನಿರಂತರವಾಗಿ ಕ್ಷೀಣಿಸುತ್ತಿದೆ. ಇದರಿಂದ ಕುಡಿಯುವ ನೀರಿಗೆ ಕೊರತೆಯಾಗುತ್ತಿದೆ. ಅಂತರ್ಜಲ ಅಭಿವೃದ್ಧಿ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಹೊಣೆ ನಮ್ಮದಾಗಬೇಕು ಎಂದರು.
ಅಂತರ್ಜಲ ಮರುಪೂರಣದಿಂದ ನೀರಿನ ಮಟ್ಟ, ಅದರ ಗುಣಮಟ್ಟ ಕಾಪಾಡಿ ಕೊಳ್ಳಬಹುದಾಗಿದೆ. ಅಂತರ್ಜಲ ಪೂರಣಕ್ಕಿಂತ ಅದರ ಬಳಕೆ ಹೆಚ್ಚಾಗಿ ಅಸಮತೋಲನ ಸ್ಥಿತಿ ಉಂಟಾಗಿದೆ. ಇದನ್ನು ಸರಿಪಡಿಸಬೇಕಾದರೆ ಅಂತರ್ಜಲ ಕೃತಕ ಮರುಪೂರಣ ರಚನೆಗಳನ್ನು ನಿರ್ಮಿಸುವುದು ಅವಶ್ಯಕ ಎಂದು ತಿಳಿಸಿದರು.
ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕ ಡಾ.ಎ.ವಿ. ನಾಗೇಶ್ ಮಾತನಾಡಿ ನೈಸರ್ಗಿಕವಾಗಿ ದೊರೆಯುವ ಅಂತರ್ಜಲ ಅಮೂಲ್ಯವಾದ ಸಂಪತ್ತು. ಈ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು. ರೈತರು ತಮ್ಮ ಕೃಷಿ ಭೂಮಿಯನ್ನು ಸಮತಟ್ಟಾಗಿಸುವುದರಿಂದ ನೀರನ್ನು ಇಂಗಿಸಬಹುದು. ಇಳಿಜಾರು ಪ್ರದೇಶವಿದ್ದರೆ ಮೆಟ್ಟಿಲು ಮೆಟ್ಟಿಲುಗಳಾಗಿ ಪರಿವರ್ತಿಸಬೇಕು ಎಂದು ತಿಳಿಸಿದರು.
ಹರಿಯುವ ನೀರಿಗೆ ಅಡ್ಡಗಟ್ಟೆ ನಿರ್ಮಾಣ ಮಾಡುವ ಜತೆಗೆ ಬದುಗಳ ಮೇಲೆ ಹುಲ್ಲು ಅಥವಾ ಗಿಡಗಳನ್ನು ಬೆಳೆಸುವುದು, ತಗ್ಗು ಪ್ರದೇಶಗಳಿಗೆ ನೀರು ಬಂದು ನಿಲ್ಲುವಂತೆ ಕಾಲುವೆ ನಿರ್ಮಾಣ ಮಾಡುವುದರಿಂದ ಅಂತರ್ಜಲ ಮರುಪೂರೈಕೆ ಮಾಡಿಕೊಳ್ಳಬಹುದು ಎಂದರು.
ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ಎಸ್.ಆರ್. ರಾಜಶ್ರೀ ಮಾತನಾಡಿ, ನೀರಿಲ್ಲದೆ ಯಾವುದೇ ಜೀವಿಯೂ ಬದುಕಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲಿನ ಅರಣ್ಯ, ಪರಿಸರ ಹಾಗೂ ಭೂಮಿಯಲ್ಲಿನ ಖನಿಜ ಸಂಪತ್ತು ನಾಶದಿಂದಾಗಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.
ಕಳೆದೆರಡು ದಶಕಗಳಲ್ಲಿ ಕೊಳವೆಬಾವಿಗಳನ್ನು ಕೊರೆಸುವುದು ಹೆಚ್ಚಾಗಿರುವ ಪರಿಣಾಮ ಅಂತರ್ಜಲದ ಬಳಕೆಯು ಅತ್ಯಧಿಕ ಹಂತವನ್ನು ತಲುಪಿ, ಅದರ ಮಟ್ಟ ಕುಸಿಯುತ್ತಿದೆ. ಮುಂದಿನ ಪೀಳಿಗೆಯ ಉಳಿವಿಗಾಗಿ ಅಂತರ್ಜಲ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈ ಮುಹಿಲನ್ ಮಾತನಾಡಿ ಭವಿಷ್ಯದಲ್ಲಿ ನೀರಿಗಾಗಿ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣ ಆಗಲು ಹೆಚ್ಚು ಸಮಯ ಬೇಕಾಗಿಲ್ಲ. ಮಳೆಯ ಪ್ರಮಾಣ ಗಣನೀಯವಾಗಿ ಕುಂಠಿತಗೊಂಡಿರುವುದರಿಂದ ಅಂತರ್ಜಲದ ಬಗ್ಗೆ ಮಾಹಿತಿ ಅಗತ್ಯವಾಗಿದೆ. ಹಿಂದೆ ಹಳ್ಳಗಳು ಒಣಗುತ್ತಿದ್ದವು, ನಂತರ ಬಾವಿಗಳೇ ಬರಿದಾಗುತ್ತಿವೆ, ಮುಂದೆ ಕೊಳವೆ ಬಾವಿಗಳಿಗೂ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಉಮೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ್, ಭೂವಿಜ್ಞಾನಿಗಳಾದ ಚೌಧರಿ, ಧನಲಕ್ಷ್ಮಿ, ಪುರುಷೋತ್ತಮ್ ಇದ್ದರು.
ಕುಂಚ ಕಲಾವಿದೆ ಸುಷ್ಮಶ್ರೀ ಅಂತರ್ಜಲವನ್ನು ಉಳಿಸಿ ಚಿತ್ರವನ್ನು ಬಿಡಿಸಿದರು. ಬಿಂದುಶ್ರೀ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.