ಶಹಾಪುರ: ತಾಲ್ಲೂಕಿನ ಭೀಮರಾಯ ನಗುಡಿ ಸಂಜನಾ ರೆಸ್ಟೊರೆಂಟ್ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸಿದ್ದಪ್ಪ ಎಂಬುವವರಿಗೆ ಇಲ್ಲಿನ ಜೆಂಎಂಎಫ್ಸಿ ನ್ಯಾಯಾಲಯ ₹10 ಸಾವಿರ ದಂಡ ಹಾಗೂ 3 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2018ರಲ್ಲಿ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಇರುವಾಗ ರೆಸ್ಟೊರೆಂಟ್ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಅಬಕಾರಿ ಸಿಬ್ಬಂದಿ ದಾಳಿ ಮಾಡಿದ್ದರು. ಅಬಕಾರಿ ಉಪ ವಿಭಾಗ ಅಧಿಕಾರಿ ಎ.ಡಿ. ಕಬಾಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಪ್ರಧಾನ ಸಿವಿಲ್ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ಅವರು ಶುಕ್ರವಾರ ಆರೋಪಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಿನಾಯಕ ಕೋಡ್ಲಾ ವಾದ ಮಂಡಿಸಿದ್ದರು.
ಹಲ್ಲೆ: ಮೂವರಿಗೆ ದಂಡ
ಶಹಾಪುರ: ತಾಲ್ಲೂಕಿನ ನಡಿಹಾಳ ಗ್ರಾಮದಲ್ಲಿ ಪರಸ್ಪರ ಹೊಡೆದಾಟ ನಡೆಸಿದ ಮೂವರು ಆರೊಪಿಗಳಿಗೆ ಇಲ್ಲಿನ ಜೆಂಎಂಎಫ್ಸಿ ನ್ಯಾಯಾಲಯ ತಲಾ ₹2 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
2017ರ ಮೇ 15ರಂದು ನಡಿಹಾಳ ಗ್ರಾಮದಲ್ಲಿ ಮಗಳನ್ನು ಮನೆಗೆ ಕರೆಯಿಸಿಕೊಡು ಎಂದು ಕೇಳಿದ್ದರಿಂದ ಮಲ್ಲಯ್ಯ ಎಂಬುವವರ ಮೇಲೆ ಆರೋಪಿಗಳಾದ ರಾಜು, ಬಸವರಾಜ, ಬಸಮ್ಮ ಹಲ್ಲೆ ನಡೆಸಿದ್ದರು.
ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ಅವರು ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ಪ್ರಕಟಿಸಿದ್ದಾರೆ.