ಯಾದಗಿರಿ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ನಾನು ಅವರಿಗೆ ನೆರವಾಗುವೆ. ನಾನು ಬಿಜೆಪಿ ಕಾರ್ಯಕರ್ತನಾಗಿದ್ದರೂ ಪಕ್ಷ ತೊರೆದು ಕಾಂಗ್ರೆಸ್ ಸೇರುವೆ. ಸಿದ್ದರಾಮಯ್ಯ ಅವರ ಚುನಾವಣಾ ಖರ್ಚು ನಿಭಾಯಿಸುವೆ. ಅವರು ಸ್ಪರ್ಧಿಸಿದರೆ, ಯಾದಗಿರಿ ಸೇರಿ ಇಡೀ ಜಿಲ್ಲೆ ಅಭಿವೃದ್ಧಿ ಆಗುವುದು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರರಾಯ ನಾಗರಾಳ ಹುಲಕಲ್ ಹೇಳಿದರು.
‘ನಾನು ರೈತನೇ ಹೊರತು ಉದ್ಯಮಿ, ಗುತ್ತಿಗೆದಾರ ಅಲ್ಲ. ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೆ, ₹ 1 ಕೋಟಿ ನೀಡುವೆ. ಶಹಾಪುರದ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಯಾದಗಿರಿಯಿಂದ ಸ್ಪರ್ಧಿಸಿದರೆ ₹25 ಲಕ್ಷ ನೀಡುವೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಒಂದು ವೇಳೆ ಸಿದ್ದರಾಮಯ್ಯಗೆ ಟಿಕೆಟ್ ನೀಡದಿದ್ದರೆ, ಕಾಂಗ್ರೆಸ್ ಮುಖಂಡರಾದ ಶರಣಪ್ಪ ಸಲಾದಪುರ, ಡಾ. ಭೀಮಣ್ಣ ಮೇಟಿ, ಅಲ್ಪಸಂಖ್ಯಾತರ ಮುಖಂಡ ಎ.ಸಿ.ಕಾಡ್ಲೂರು ಅವರಿಗೆ ಟಿಕೆಟ್ ನೀಡಬೇಕು’ ಎಂದು ಅವರು ಹೇಳಿದರು.