ಹುಣಸಗಿ: ಕಳೆದ ಒಂದು ವಾರದಿಂದ ಉಂಟಾಗಿರುವ ಹವಾಮಾನ ವೈಪರೀತ್ಯ ಹಾಗೂ ಶೀತಗಾಳಿಯಿಂದಾಗಿ ಅಲ್ಲಲ್ಲಿ ಭತ್ತ ನೆಲಕ್ಕೆ ಬಿದ್ದಿದ್ದು, ದಿನದಿಂದ ದಿನಕ್ಕೆ ಹಾನಿ ಹೆಚ್ಚುತ್ತಲೇ ಇದೆ.
ವಾಯುಭಾರ ಕುಸಿತದ ಪರಿಣಾಮ ಇಲ್ಲಿ ಉಂಟಾಗಿದ್ದು, ಕಳೆದ ಒಂದು ವಾರದಿಂದಲೂ ಬಿಸಿಲು ಇಲ್ಲದೇ ಶೀತಗಾಳಿ ಹಾಗೂ ಮಂಜು ಕವಿದ ವಾತಾವಣ ಇದೆ. ಅಲ್ಲದೇ ಕೆಲ ಹೊತ್ತು ತುಂತುರು ಮಳೆ ಕೂಡಾ ಬರುತ್ತಿದೆ. ಪಟ್ಟಣದ ವ್ಯಾಪ್ತಿಯಲ್ಲಿ 4.8 ಮಿಮೀ ಮಳೆಯಾಗಿದ್ದು, ಇನ್ನು ತಾಲ್ಲೂಕಿನಲ್ಲಿ ಶೀತ ವಾತಾವರಣ ಮುಂದುವರಿದೆ.
’ಸದ್ಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಎಲ್ಲೆಡೆ ಭತ್ತ ಕಾಳು ಕಟ್ಟಿದ್ದು ಇನ್ನು ಒಂದು ವಾರದಲ್ಲಿ ಕಟಾವಿಗೆ ಬರುತ್ತಿದೆ. ಆದರೆ ತಂಪಾದ ವಾತಾವರಣದಿಂದಾಗಿ ಆರ್.ಎನ್.ಆರ್ ತಳಿಯ ಭತ್ತ ನೆಲಕ್ಕೆ ಬಿದ್ದಿದ್ದು, ಸಾಕಷ್ಟು ಹಾನಿಯಾಗಿದೆ‘ ಎಂದು ರೈತ ಶಾಂತಗೌಡ ಪಾಟೀಲ ಹೇಳಿದರು.
ಈಗಾಗಲೇ ಸರ್ವೆ ಜಂಟಿ ಕಾರ್ಯ ನಡೆದಿದ್ದು, ಹಾನಿಯಾದ ಪ್ರತಿಯೊಂದು ಜಮೀನುಗಳಿಗೆ ಭೇಟಿ ನೀಡಿ ಸರ್ವೆ ಮಾಡುತ್ತಿರುವದಾಗಿ ಗ್ರಾಮ ಲೆಕ್ಕಾಧಿಕಾರಿ ತಾರಾಚಂದ್ ತಿಳಿಸಿದರು.
ಹುಣಸಗಿ ಹೋಬಳಿ ವ್ಯಾಪ್ತಿಯಲ್ಲಿ 1459 ಎಕರೆ ಪ್ರದೇಶದಲ್ಲಿ ಭತ್ತ ಹಾಗೂ 386 ಎಕರೆ ಪ್ರದೇಶದಲ್ಲಿ ತೊಗರಿ ಹಾನಿಯಾಗಿದ್ದು, ಕೊಡೇಕಲ್ಲ ವ್ಯಾಪ್ತಿಯಲ್ಲಿ 659 ಎಕರೆ ಭತ್ತ ಹಾಗೂ 1080 ಎಕರೆ ತೊಗರಿ ಹಾಗೂ 244 ಎಕರೆ ಪ್ರದೇಶದಲ್ಲಿ ಹತ್ತಿ ಹಾನಿಯಾಗಿದೆ ಎಂದು ಹುಣಸಗಿ ತಹಶೀಲ್ದಾರ್ ಅಶೋಕ ಸುರಪುರಕರ್ ಮಾಹಿತಿ ನೀಡಿದರು. ವಿವರವಾದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಡಲಾಗಿದೆ ಎಂದು ವಿವರಿಸಿದರು.
‘ಕಳೆದ ವರ್ಷ ಹಾನಿಯಾದ ಬೆಳೆಗಳಿಗೆ ಇನ್ನೂ ಕೆಲ ರೈತರಿಗೆ ಪರಿಹಾರ ಬಂದಿಲ್ಲ. ಮತ್ತೆ ಈಗ ಬೆಳೆ ಹಾನಿಯಾಗಿದೆ‘ ಎಂದು ರಾಜ್ಯ ರೈತ ಸಂಘದ ಪ್ರಮುಖ ರುದ್ರಣ್ಣ ಮೇಟಿ ಹಾಗೂ ಶಿವಲಿಂಗ ಪಟ್ಟಣಶೆಟ್ಟಿ ಅವರು ನೋವು ತೋಡಿಕೊಂಡಿದ್ದಾರೆ.