ಯರಗೋಳ: 10ನೇ ತರಗತಿ, ಪಿಯುಸಿ, ಪದವಿಯಲ್ಲಿ ಪ್ರಥಮ ಸಲ ಅನುತ್ತೀರ್ಣಗೊಂಡ ಕೃಷಿಕ ಕುಟುಂಬದ ಯುವಕ ವೆಂಕಟೇಶ 9 ಸರ್ಕಾರಿ ನೌಕರಿ ಪಡೆದು ಸಾಧನೆ ಮಾಡಿದ್ದು ವಿದ್ಯಾರ್ಥಿಗಳಿಗೆ, ಸ್ಪರ್ಧಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಕೆ.ಎಸ್.ಎ.ಎಸ್ಸಹಾಯಕ ನಿಯಂತ್ರಕರು (ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ಇಲಾಖೆ ಹಣಕಾಸು ಸಚಿವಾಲಯ) ಅಧಿಕಾರಿಯಾಗಿ ತವರು ಜಿಲ್ಲೆ ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯರಗೋಳ ಗ್ರಾಮದ ರೈತ ಬಸವರಾಜ, ನಾಗಮ್ಮ ಚಟ್ನಳ್ಳಿ ದಂಪತಿಯ ದ್ವಿತೀಯ ಪುತ್ರ ವೆಂಕಟೇಶ (27) ಬಡತನದ ಬೇಗುದಿಯಲ್ಲಿ ಛಲ ಬಿಡದೆ ಓದಿ ಉನ್ನತ ಅಧಿಕಾರಿಯಾಗಿ ಗ್ರಾಮಕ್ಕೆ, ತಂದೆ, ತಾಯಿಗಳಿಗೆ ಕೀರ್ತಿ ತಂದಿದ್ದಾರೆ.
ಯರಗೋಳದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದು, 10ನೇ ತರಗತಿ ಹಾಗೂದ್ವಿತೀಯ ಪಿಯುಸಿ ಅನುತ್ತೀರ್ಣರಾದರೂ ಛಲಬಿಡದ ವೆಂಕಟೇಶ್ ಅವರುಯಾದಗಿರಿ ಸರ್ಕಾರಿಪದವಿ ಮಹಾವಿದ್ಯಾಲಯದಲ್ಲಿ ಬಿಬಿಎಂ ಮತ್ತು ಎಂಕಾಂ ಪದವಿ ಪೂರೈಸಿದ್ದಾರೆ.
2016ರಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಸಿದ್ಧತೆಗಾಗಿ ದೆಹಲಿಯಲ್ಲಿ ತರಬೇತಿ ಪಡೆದು 2017ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಆಯ್ಕೆಯಾಗಿ ರಾಯಚೂರು ಕಾರಾಗೃಹ ಇಲಾಖೆಯಲ್ಲಿ 6 ತಿಂಗಳು ಸೇವೆ ಸಲ್ಲಿಸಿದ್ದಾರೆ. 2017ರಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಆಯ್ಕೆಯಾಗಿ ಕಕ್ಕೇರಾ ಪುರಸಭೆಯಲ್ಲಿ 6 ತಿಂಗಳು ಸೇವೆ ಮಾಡಿದ್ದಾರೆ. 2014ರಲ್ಲಿ ಕರ್ನಾಟಕ ಲೋಕಸೇವಾ ಕೆಎಎಸ್ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಪುರಸಭೆ ಮುಖ್ಯಾಧಿಕಾರಿ, ಪ್ರಥಮ ದರ್ಜೆ ಕಂದಾಯ ಅಧಿಕಾರಿ, ಹಿರಿಯ ಲೆಕ್ಕಿಗ, ಲೆಕ್ಕಿಗ, ಅಬಕಾರಿ ಗಾರ್ಡ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದರು.
ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಪ್ರತಿದಿನ ಮುಂಜಾವು6 ರಿಂದ 8ಗಂಟೆಗಳ ಕಾಲ ಓದುವ ಮೂಲಕ ಪ್ರತಿ ಸಲ ಓದಿದ್ದನ್ನು ಪುನರ್ ಮನನ ಮಾಡಿಕೊಳ್ಳುವುದು. ಹಳೆಯ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬಿಡಿಸುವುದು. ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಮಾಡಬೇಕು ಎಂದು ಸ್ಪರ್ಧಾರ್ಥಿಗಳಿಗೆ ಹೇಳಿದರು.
ಪರೀಕ್ಷೆ ಸಿದ್ಧತೆಗಾಗಿ ಮಾಸಿಕ ಸ್ಪರ್ಧಾತ್ಮಕ ಪುಸ್ತಕಗಳಾದ ಪ್ರತಿಯೋಗಿತ ದರ್ಪಣ, ಸ್ಪರ್ಧಾ ಚೈತ್ರಾ, ಸ್ಪರ್ಧಾ ಸ್ಫೂರ್ತಿ, ಯೋಜನಾ, ಅನ್ಯ ರಾಜ್ಯಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು, ಪ್ರಜಾವಾಣಿ, ದಿ ಹಿಂದು ಆಂಗ್ಲಪತ್ರಿಕೆ ಓದುವುದರಿಂದಲೂಸಹಾಯವಾಗುತ್ತದೆ ಎಂದರು.
ಸಹಾಯಕ ನಿಯಂತ್ರಕರು ವೆಂಕಟೇಶ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಅಚಲ ನಿರ್ಧಾರ, ಸತತ ಪ್ರಯತ್ನ, ತಂದೆ, ತಾಯಿ, ಗುರು, ಹಿರಿಯರ ಮಾರ್ಗದರ್ಶನ ಪಡೆಯಬೇಕು ಎಂದು ಹೇಳಿದರು.
***
ಅಪ್ಪಟ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಯಾದ ವೆಂಕಟೇಶ್ ಓದಿನಲ್ಲಿ ಸದಾ ಮುಂದೆಯೇ ಇದ್ದ ನಮ್ಮ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ನನಗೆ ಸಂತಸವಾಗುತ್ತಿದೆ. ಪ್ರತಿಯೊಬ್ಬರಿಗೂ ಈತ ಮಾದರಿ.
***
ಬಡತನ ರೀತಿಯಲ್ಲಿ ಸಾಲಿ ಓದಿ ದೇವರ ಪುಣ್ಯದಿಂದ ನನ್ನ ಮಗ ದೊಡ್ಡ ನೌಕರಿ ಮಾಡುವುದು ಖುಷಿಯಾಗಿದೆ. ನಾಲ್ಕು ಜನರಿಗೆ ಒಳ್ಳೆಯದಾಗುವ ಕೆಲಸ ಮಾಡಿದರೆ ಸಾಕು.
-ತಾಯಿ ನಾಗಮ್ಮ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.