ಯಾದಗಿರಿ: ‘ಪಡಿತರ ಪಡೆಯಲು ಬರುವ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.5 ಕಿ.ಮೀ. ಅಂತರದಲ್ಲಿ ಪಡಿತರ ಕೇಂದ್ರ ಆರಂಭಿಸಲಾಗುವುದು’ ಎಂದು ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಹೇಳಿದರು.
ನಗರದ ವಿವಿಧೆಡೆ ಆರಂಭವಾಗಿರುವ ಪಡಿತರ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಸದ್ಯ ಗುರುವಾರ ಅಕ್ಕಿ ಮಾತ್ರ ಬಂದಿದೆ.ಶುಕ್ರವಾರಗೋಧಿ ಬಂದರೆ ಅದನ್ನು ವಿತರಿಸಲಾಗುವುದು. ಜನ ಗುಂಪುಗೂಡದಂತೆ ಮಾಡಲು ಸರ್ಕಾರಿ ಶಾಲೆಗಳಲ್ಲಿಯೂ ಪಡಿತರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 5 ಕಿ.ಮೀ. ಅಂತರದಲ್ಲಿ ಒಂದು ಕೇಂದ್ರ ತೆರೆದು ಅಲ್ಲಿಯೇ ವಿತರಿಸಲಾಗುವುದು’ ಎಂದರು.
‘ನ್ಯಾಯ ಬೆಲೆ ಅಂಗಡಿಯಲ್ಲಿ ಸ್ಯಾನಿಟೈಸರ್, ಕೈ ತೊಳೆಯಲು ಸಾಬೂನು ಸೇರಿದಂತೆ ಸಾಮಾಜಿಕ ಅಂತರಕ್ಕೆಒತ್ತು ನೀಡಬೇಕು. ವೃತ್ತ ಹಾಕಿ ಒಬ್ಬೊಬ್ಬರು ಒಂದೊಂದು ಮೀಟರ್ ಅಂತರ ಕಾಯ್ದುಕೊಳ್ಳುವಂತೆ’ ಸೂಚಿಸಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ದತ್ತಪ್ಪ ಕಲ್ಲೂರ ಮಾತನಾಡಿ, ‘ಎರಡು ದಿನದಲ್ಲಿ ಪಡಿತರ ವಿತರಣೆ ಮುಕ್ತಾಯಗೊಳಿಸಲು ಕ್ರಮಕೈಗೊಳ್ಳಿ. ಎಲ್ಲರಿಗೂ ಪಡಿತರ ತಲುಪವಂತೆ ಮೊಬೈಲ್ ಮೂಲಕ ಸಂಪರ್ಕಿಸಿ ನೀಡಿ. ಮೊಬೈಲ್ ಓಟಿಪಿ ಮೂಲಕವೇ ಪಡಿತರ ವಿತರಿಸಬೇಕು. ಯಾವ ಕಾರಣಕ್ಕೂ ಬೆರಳಚ್ಚು ತೆಗೆದುಕೊಳ್ಳಬಾರದು. ಇದು ಮತ್ತೊಂದು ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಯಾರನ್ನೂ ಗುಂಪು ಗೂಡಿಸದೆ ಒಬ್ಬೊಬ್ಬರನ್ನು ಕರೆದು ಧಾನ್ಯ ನೀಡಿ ಎಂದು ನ್ಯಾಯಬೆಲೆ ಅಂಗಡಿಯವರಿಗೆ’ ಸೂಚಿಸಿದರು.
ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.