ಹುಣಸಗಿ: ತಾಲ್ಲೂಕಿನ ಬನ್ನೇಟ್ಟಿ ಗ್ರಾಮದ ಹೊಲದ ಸರ್ವೆ ಮಾಡಿ, ಹದ್ದುಬಸ್ತ್, ನಕಾಶೆ ಮಾಡಿಕೊಡಲು ರೈತರೊಬ್ಬರಿಂದ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಹುಣಸಗಿ ತಾಲ್ಲೂಕಿನ ಬನ್ನೆಟ್ಟಿ ಗ್ರಾಮದ ರೈತ ಮಹಾದೇವಪ್ಪ ಬಡಿಗೇರ ಅವರ ಜಮೀನಿನ ಸರ್ವೆ ಹಾಗೂ ಹದ್ದುಬಸ್ತ್, ನಕಾಶೆ ಮಾಡಿಕೊಡಲು ಸರ್ವೆಯರ್ ರವಿಕುಮಾರ ₹3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ₹2.50 ಲಕ್ಷ ನೀಡುವುದಾಗಿ ಮಹಾದೇವಪ್ಪ ಒಪ್ಪಿದ್ದರು.
ಬುಧವಾರ ಕಕ್ಕೇರಿ ಕ್ರಾಸ್ ಬಳಿ ಸರ್ವೆಯರ್ ತಿಳಿಸಿದ ವ್ಯಕ್ತಿ ನಾಗೇಶರಾವ ತಿರುಪತಿ ಅವರಿಗೆ ಮಹಾದೇವಪ್ಪ ಅವರು ಹಣ ಕೊಡುತ್ತಿದ್ದ ಸಂದರ್ಭದಲ್ಲಿ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಸರ್ವೆಯರ್ ರವಿಕುಮಾರ ಹಾಗೂನಾಗೇಶರಾವ ತಿರುಪತಿ ಅವರನ್ನು ಹಣದ ಸಮೇತ ಬಂಧಿಸಲಾಗಿದೆ.
2019ರ ಜುಲೈನಲ್ಲಿ ಸರ್ವೆಗಾಗಿ ಅರ್ಜಿ ಸಲ್ಲಿಸಿದ್ದಾಗಿ ದೂರುದಾರ ಮಹಾದೇವಪ್ಪ ತಿಳಿಸಿದ್ದಾರೆ.
ಎಸಿಬಿ ಎಸ್ಪಿ ಮಹೇಶ ಮೇಘಣ್ಣವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಯಾದಗಿರಿ ಡಿವೈಎಸ್ಪಿ ಉಮಾಶಂಕರ, ತನಿಖಾಧಿಕಾರಿಗಳಾದ ಬಾಬಾ ಸಾಹೇಬ ಪಟೇಲ, ಗುರುಪಾದ ಬಿರಾದಾರ, ರಾಘವೇಂದ್ರ, ನಿರಂಜನ ಪಾಟೀಲ ಹಾಗೂ ಸಿಬ್ಬಂದಿ ವಿಜಯಕುಮಾರ, ಮರೆಪ್ಪ, ಅಮರನಾಥ, ಗುತ್ತಪ್ಪಗೌಡ ಇದ್ದರು.