ಸೈದಾಪುರ: ‘ಸಾರ್ವಜನಿಕರಿಗೆ ತಮ್ಮ ಕೆಲಸಕ್ಕಾಗಿ ನಿತ್ಯ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಜಿಲ್ಲಾಡಳಿತವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಇದರ ಸುದಪಯೋಗ ಪ್ರತಿಯೊಬ್ಬರು ಪಡೆದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸ್ನೇಹಲ್.ಆರ್. ತಿಳಿಸಿದರು.
ಸಮೀಪದ ಕಾಳೆಬೆಳಗುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅಹವಾಲು ಸ್ವೀಕರಿಸಿ, ಫಲಾನುಭವಿಗಳಿಗೆ ಸೌಲಭ್ಯ ಪತ್ರ ವಿತರಿಸಿ ಮಾತನಾಡಿದರು.
ಒಟ್ಟು 77 ಕುಂದುಕೊರತೆ ಅರ್ಜಿಗಳನ್ನು ಸ್ವೀಕರಿಸಲಾಯಿತು. ಅದರಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 19 ಅರ್ಜಿಗಳು ಹಾಗೂ ಇತರೆ ಇಲಾಖೆಗೆ ಸಂಬಂಧಿಸಿದ 58 ಅರ್ಜಿಗಳನ್ನು ಸ್ವೀಕರಿಸಿ ಸಂಬಂಧಿಸಿದ ಇಲಾಖೆಗೆ ರವಾನಿಸಲಾಯಿತು.
ಅದ್ಧೂರಿ ಸ್ವಾಗತ: ಕಾಳೆಬೆಳಗುಂದಿ ಗ್ರಾಮದ ಮಹಿಳೆಯರು ಸಂಪ್ರದಾಯದಂತೆ ಜಿಲ್ಲಾಧಿಕಾರಿ ಸ್ನೇಹಲ್.ಆರ್ ಅವರಿಗೆ ಆರತಿ ಬೆಳಗಿ, ವಿವಿಧ ವಾದ್ಯಗಳ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.
ದೇವಸ್ಥಾನಕ್ಕೆ ಭೇಟಿ, ಸಸಿನೆಟ್ಟು ಜಾಗೃತಿ: ಜಿಲ್ಲಾಧಿಕಾರಿ ಗ್ರಾಮದ ಬನದೇಶ್ವರ ಮತ್ತು ಕಾಳಿಕಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಸಲ್ಲಿಸಿ, ಪ್ರಸಾದ ಸೇವಿಸಿದರು. ಬಳಿಕ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು.
ಮೊರಾರ್ಜಿ ವಸತಿ ಶಾಲೆಗೆ ಭೇಟಿ: ಕಾಳೆಬೆಳಗುಂದಿ ಗ್ರಾಮದ ಹತ್ತಿರವಿರುವ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಕುಂದುಕೊರತೆ, ಊಟ. ಉಪಹಾರ ವ್ಯವಸ್ಥೆ, ಶಿಕ್ಷಣದ ಗಣಮಟ್ಟದ ಬಗ್ಗೆ ಪರಿಶೀಲನೆ
ಮಾಡಿದರು.
ಸಮಯ ವ್ಯರ್ಥ ಮಾಡದೆ ಉತ್ತಮವಾಗಿ ಅಭ್ಯಾಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಸತಿ ನಿಲಯದಲ್ಲಿ ತಯಾರಿಸಿದ ಊಟವನ್ನ ವಿದ್ಯಾರ್ಥಿಗಳೊಂದಿಗೆ ಸವಿದರು. ಪ್ರತಿದಿನ ಗುಣಮಟ್ಟದ ಊಟ ನೀಡಿ ಹಾಗೂ ಶುಚಿತ್ವ ಕಾಪಾಡುವಂತೆ ಮೇಲ್ವಿಚಾರಕರಿಗೆ ಸೂಚಿಸಿದರು.
ಇದಕ್ಕೂ ಮೊದಲು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ಗುರುಮಠಕಲ್ ತಹಶೀಲ್ದಾರ್ ಶರಣಬಸವ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ, ಪಿಡಿಒ ಭೀಮರಾಯ ಮಡಗೋರ್, ಸಮಾಜ ಕಲ್ಯಾಣ ಇಲಖೆಯ ಅಧಿಕಾರಿ ಚನ್ನಬಸವ ಎಸ್., ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಪ್ರಭುದೊರೆ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಾಘವೇಂದ್ರ, ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಕೋಳಿ, ಸಾರಿಗೆ ವಿಭಾಗೀಯ ಅಧಿಕಾರಿ ರಮೆಶ ಪಾಟೀಲ್, ಯಾದಗಿರಿ ತಾಲ್ಲೂಕ ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.