ಯಾದಗಿರಿ: ಜನವರಿ 5ರಿಂದ 30ರವರೆಗೆ ಜಿಲ್ಲೆಯಾದ್ಯಂತ ಆನೆಕಾಲು ರೋಗ ನಿಯಂತ್ರಣಕ್ಕಾಗಿ ಮಾತ್ರೆ ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಲಕ್ಷ್ಮೀಕಾಂತ ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಸೋಮವಾರ ಮಾತ್ರೆ ನುಂಗಿಸುವ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 5 ವರ್ಷ ಮೇಲ್ಪಟ್ಟ 23,9079 ಮಕ್ಕಳಿದ್ದಾರೆ. ಆರೋಗ್ಯ ಸಿಬ್ಬಂದಿ 1361 ಅಂಗನವಾಡಿ ಕೇಂದ್ರ ಹಾಗೂ 1549 ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳಿಗೆ ಡಿಇಸಿ ಮತ್ತು ಆಲ್ಬೆಂಡಜೊಲ್ ಮಾತ್ರೆಗಳನ್ನು ನೀಡಲಿದ್ದಾರೆ ಎಂದರು.
ಜನವರಿ 5ರಿಂದ 10 ವರೆಗೆ ಶಾಲೆ, ಅಂಗನವಾಡಿ, ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಮಾತ್ರೆ ನುಂಗಿಸಲಾಗುವುದು. ಜನವರಿ 11 ರಿಂದ 14ರ ವರೆಗೆ ಮನೆ ಮನೆ ಭೇಟಿ ನೀಡುವ ಹಾಗೂ 16ರಿಂದ 30ರವರೆಗೆ ಪುನರ್ ಭೇಟಿ ಅನುಸರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮದ ಹಿನ್ನಲೆ ಎಲ್ಲಾ ಹಂತದ ತರಬೇತಿಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ ಎಂದರು.
ಯಾದಗಿರಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಭಗವಂತ ಅನ್ವರ, ಯಾದಗಿರಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮುಬಾಷೀರ ಅಹಮ್ಮದ ಸಾಜೀದ, ಯಾದಗಿರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಶಹಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ಇದ್ದರು.