ಕೆಂಭಾವಿ: ‘ಸಮಾಜದ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಅಂಬಿಗರ ಚೌಡಯ್ಯ ಅವರ ಜನ್ಮದಿನ ಆಚರಣೆಗೆ ಅರ್ಥ ಬರುತ್ತದೆ‘ ಎಂದು ಜೆಡಿಎಸ್ ಪ್ರತಿನಿಧಿ ಸುನಿತಾ ತಳವಾರ ಹೇಳಿದರು.
ಸಮೀಪದ ಯಕ್ತಾಪುರ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯನವರ ಜನ್ಮದಿನ ಹಾಗೂ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಿಕ್ಷಣದಿಂದ ವಂಚಿತರಾದರೆ ಸಮಾಜದಲ್ಲಿ ಮುಂದೆಬರಲು ಸಾಧ್ಯವಾಗುವುದಿಲ್ಲ ಎಂದ ಅವರು, ನುಡಿದಂತೆ ನಡೆಯುವುದು, ನಡೆದಂತೆ ನುಡಿಯುವುದು ಚೌಡಯ್ಯನವರ ದಿನಚರಿಯಾಗಿತ್ತು . ಅವರ ಆದರ್ಶಗಳನ್ನು ನಾವೇಲ್ಲರೂ ಪಾಲಿಸಬೇಕು. ಮೂಡ ನಂಬಿಕೆಗಳನ್ನು ಬಿಟ್ಟು ಕಾಯಕದಲ್ಲಿ ಹೆಚ್ಚು ಆಸಕ್ತಿ ತೋರಬೇಕು’ ಎಂದು ಹೇಳಿದರು.
ಕಂದಾಯ ನಿರೀಕ್ಷಕ ಲಕ್ಷ್ಮಣ ತಳವಾರ ಮಾತನಾಡಿ, ‘ಕೊರೊನಾ ರೋಗ ಇನ್ನೂ ಹೋಗಿಲ್ಲ. ತಜ್ಞರ ಪ್ರಕಾರ ಮೂರನೆ ಅಲೆ ಬರಲಿದೆ. ಮಕ್ಕಳನ್ನು ಸುರಕ್ಷಿತವಾಗಿಡಲು ಎಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕು’ ಎಂದು ಹೇಳಿದರು.
ಪಿಎಸ್ಐ ಗಜಾನಂದ ಬಿರಾದಾರ ಮಾತನಾಡಿ, ‘ಕೊರೊನಾ ವಾರಿಯರ್ಸ್ಗಳಿಗೆ ಮಾಡಿದ ಸನ್ಮಾನ ಉತ್ತಮವಾದದ್ದು, ತಮ್ಮ ಜೀವದ ಹಂಗುತೊರೆದು ಹಲವು ಇಲಾಖೆಯವರು ಕರ್ತವ್ಯ ನಿರ್ವಹಿಸಿದ್ದು ಅಂತವರನ್ನು ಗುರುತಿಸಿರುವುದು ಉತ್ತಮ ಕೆಲಸ‘ ಎಂದು ಹೇಳಿದರು.