ಯಾದಗಿರಿ: ಮಾರ್ಚ್ 5ರಂದು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಲಿರುವ ಬಜೆಟ್ನಲ್ಲಿ ಜಿಲ್ಲೆಗೆ ಅಗತ್ಯವಾದ ಬ್ರಿಜ್ ಕಂ ಬ್ಯಾರೇಜ್, ಎಂಜಿನಿಯರಿಂಗ್, ಪಿಯು ಕಾಲೇಜು, ಮೊರಾರ್ಜಿ ದೇಸಾಯಿವಸತಿ ಶಾಲೆಗೆ ಬೇಡಿಕೆ ಇಡಲಾಗಿದೆ ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ತಿಳಿಸಿದರು.
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಹೀಗಾಗಿಎಂಜಿನಿಯರಿಂಗ್ ಕಾಲೇಜಿಗಾಗಿ ಬೇಡಿಕೆ ಇಡಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಕೃಷ್ಣಾ, ಭೀಮಾನದಿ ಹರಿಯುತ್ತಿದ್ದು, ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಹೀಗಾಗಿ ಚೆನ್ನೂರ (ಜೆ) ಮತ್ತು ಠಾಣಗುಂದಿ ಬಳಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಆದ್ಯತೆ ನೀಡಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ರೈಲ್ವೆ ಪೊಲೀಸ್ ಠಾಣೆ,ವಡಗೇರಾ ತಾಲ್ಲೂಕಿನಲ್ಲಿ ಪಿಯು ಕಾಲೇಜುನಿರ್ಮಾಣಕ್ಕೆಬೇಡಿಕೆ ಸಲ್ಲಿಸಲಾಗಿದೆ. ನೂತನ ಜಿಲ್ಲಾಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ರೈತರಿಗೆ ಅನ್ಯಾಯವಾಗಿದೆ. ಇದನ್ನು ಪರಿಶೀಲಿಸಿ ಸರಿಪಡಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ದೋರನಹಳ್ಳಿ ಬಳಿ ಇರುವ ಹಾಲು ಶೀತಲೀಕರಣ ಕೇಂದ್ರದ ಪುನಶ್ಚೇತನಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಪಕ್ಷದ ನಾಲ್ವರಿಗೆ ಜಿಲ್ಲಾ ಘಟಕದ ಅಧ್ಯಕ್ಷರು ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪಕ್ಷವೂ ನಾಲ್ವರಿಗೆ ನೋಟಿಸ್ ನೀಡಿದೆ. ಅವರು ಸೂಕ್ತ ಉತ್ತರ ನೀಡಿದ್ದಾರೆ. ಇದೆಲ್ಲ ಪಕ್ಷದ ಚೌಕಟ್ಟಿನಲ್ಲಿ ನಡೆಯುವ ವಿಚಾರ. ಜಿಲ್ಲಾಧ್ಯಕ್ಷರನ್ನು ಯಾರನ್ನೂ ಕೇಳಿ ನೇಮಕ ಮಾಡಿದ್ದೀರಿ ಎಂದು ನಾಲ್ವರು ಪ್ರಶ್ನಿಸಿದ್ದಾರೆ. ಹೀಗಾಗಿ ಇದು ಪಕ್ಷದ ಅಂತರಿಕ ವಿಚಾರ ಎಂದು ತಿಳಿಸಿದರು.
ಈ ವೇಳೆ ಪಕ್ಷದ ಮುಖಂಡರಾದ ಮಲ್ಲನಗೌಡ ಹತ್ತಿಕುಣಿ, ಖಂಡಪ್ಪ ದಾಸನ್, ರಾಚನಗೌಡ ಮುದ್ನಾಳ, ಸುರೇಶ ಅಂಬಿಗೇರ, ವಿಲಾಸ ಪಾಟೀಲ, ಲಲಿತಾ ಅನಪುರ, ವೀಣಾ ಮೋದಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.