ವಡಗೇರಾ: ಆರೋಗ್ಯ ಸಚಿವ ಶ್ರೀರಾಮುಲು ತಾಲ್ಲೂಕಿನ ಗೋನಾಲ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ದುರ್ಗಾದೇವಿಯ ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು.
‘ದೇವಿಯ ಶಕ್ತಿ ಕಂಡು ದೇವಿಯ ದರ್ಶನ ಪಡೆಯಲು ಬಂದಿದ್ದೇನೆ. ದೇವಿಯ ಆಶೀರ್ವಾದ ಇದ್ದರೆ ಯಶಸ್ಸು ಕಾಣುತ್ತೇನೆ’ ಎಂದರು.
ದುರ್ಗಾದೇವಿ ಮೂರ್ತಿ ಬಗ್ಗೆ ಮತ್ತು ದೇವಿಯ ಮಹತ್ವದ ಬಗ್ಗೆ ಮಾಹಿತಿ ಪಡೆದುಕೊಂಡರು. ‘ಶ್ರೀರಾಮುಲು, ಉಪ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ’ ಎಂದು ಅವರು ಬರೆದ ಚೀಟಿಯನ್ನು ದೇವಿಯ ಮುಂದೆ ಇಟ್ಟು ಪೂಜೆ ಮಾಡಲಾಯಿತು ಎಂದು ದೇವಿಯ ಅರ್ಚಕ ಮರೆಣ್ಣ ಪೂಜಾರಿ ಮಾಹಿತಿ ನೀಡಿದರು.
ಕಳೆದ ಜನವರಿ ತಿಂಗಳಲ್ಲಿ ನಡೆದ ಜಾತ್ರೆಗೆ ಡಿ.ಕೆ ಶಿವಕುಮಾರ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ನಂತರದಲ್ಲಿ ಅವರು ತಾಯಿಯ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು. ಅದರಂತೆ ಇವರು ಸಹ ತಾಯಿಯ ದರ್ಶನದಿಂದ ಮುಂದಿನ ಮುಖ್ಯಮಂತ್ರಿಯಾಗುವರೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಸ್ಥಳೀಯರು.
ಈ ಸಂದರ್ಭದಲ್ಲಿ ಚಂದ್ರಶೇಖರಗೌಡ ಮಾಗನೂರು, ಸಿದ್ದಣ್ಣಗೌಡ ಕಾಡಂನೋರ್ ಇದ್ದರು.