ಕೆಂಭಾವಿ: ಸಮೀಪದ ಕೆಂಭಾವಿ- ತಾಳಿಕೋಟಿ ರಾಜ್ಯ ಹೆದ್ದಾರಿಯಲ್ಲಿ ಬರುವ ಆಲ್ದಾಳ ಗ್ರಾಮದ ಹೊರವಲಯದ ಸರ್ವೆ ನಂ.125 ರಲ್ಲಿ ಶ್ರೀಶೈಲ ಶರಣಪ್ಪ ಮಾಗಣಗೇರಿ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಹಾನಿಗೊಳಗಾಗಿವೆ.
4 ಎಕರೆ ತೋಟದಲ್ಲಿ 5 ಸಾವಿರಕ್ಕೂ ಅಧಿಕ ಬಾಳೆ ಗಿಡಗಳನ್ನು ಬೆಳೆಯಲಾಗಿತ್ತು. ಕಳೆದ ವರ್ಷ ಬಾಳೆಯನ್ನು ನಾಟಿ ಮಾಡಲಾಗಿತ್ತು. ಬಾಳೆ ಹುಲುಸಾಗಿ ಬೆಳೆದಿತ್ತು. ಕಟಾವುಗೆ ಮುಂದಾಗಬೇಕು ಅನ್ನುವಷ್ಟರಲ್ಲಿ ಗಾಳಿ- ಮಳೆಗೆ ತುತ್ತಾಗಿ ಬಾಳೆಗಿಡಗಳು ನೆಲಕ್ಕೆಕುರಳಿವೆ ಎಂದು ಶ್ರೀಶೈಲ್ ಮಾಗಣಗೇರಿ ತಿಳಿಸಿದರು.
ಸುಮಾರು ₹8 ಲಕ್ಷ ಖರ್ಚು ಮಾಡಿದ್ದೇವೆ.ಸುಮಾರು ₹10 ರಿಂದ 15 ಲಕ್ಷದವರೆಗೆ ಆದಾಯ ನಿರೀಕ್ಷೆ ಮಾಡಿದ್ದೇವು. ಲಾಕ್ಡೌನ್ ಸಡಿಲಿಕೆ ನಂತರ ಕಟಾವು ಕಾರ್ಯ ಆರಂಭವಾಗುತ್ತಿತ್ತು.ಈಗ ಬಾಳೆ ಹಾನಿಯಾಗಿರುವುದರಿಂದ ಅಪಾರ ನಷ್ಟವಾಗಿದೆ ಎಂದು ತಮ್ಮ ನೋವು ತೋಡಿಕೊಂಡರು.
ಕೈಯಲ್ಲಿದ್ದ ಹಣವನ್ನು ಖರ್ಚು ಮಾಡಿ ಬಾಳೆ ಬೆಳೆ ಬೆಳೆದಿದ್ದೇವೆ. ಫಸಲು ಕೈಗೆ ಬರುವ ಹೊತ್ತಿನಲ್ಲಿ ಭಾರೀ ಬಿರುಗಾಳಿ ಮಳೆಗೆ ಬಾಳೆ ಗಿಡಗಳು ಗೊನೆ ಸಮೇತ ನೆಲಕ್ಕೆ ಬಿದ್ದಿವೆ. ಇದರಿಂದ ಅಪಾರ ಹಾನಿಯಾಗಿದೆ. ಶೀಘ್ರವೇ ಸರ್ಕಾರ ನಮಗೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಮಳೆಯಿಂದಾಗಿ ಬೆಳೆ ನಾಶವಾಗಿ ದ್ದರಿಂದ ರೈತರು ನಷ್ಟ ಅನುಭವಿಸಿದ್ದಾರೆ. ಸರ್ಕಾರ ಬಡವರ ಕಷ್ಟಕ್ಕೆ ಧಾವಿಸಬೇಕು ಎಂದು ಪಾಂತ್ರ ರೈತ ಸಂಘದ ಕೆಂಭಾವಿ ಹೋಬಳಿ ಅಧ್ಯಕ್ಷ ರಾಮನಗೌಡ ಗೂಗಲ್ ಒತ್ತಾಯಿಸಿದ್ದಾರೆ.
* ಈಗಾಗಲೇ ಆಲ್ಹಾಳ ಗ್ರಾಮದ ಬಾಳೆ ತೋಟಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸಮೀಕ್ಷೆ ವರದಿ ಬಂದ ಕೂಡಲೇ ಆನ್ಲೈನ್ನಲ್ಲಿ ವರದಿಸಲ್ಲಿಸಲಾಗುವುದು. -ಸುಬ್ಬಣ್ಣ ಜಮಖಂಡಿ, ತಹಶೀಲ್ದಾರ್, ಸುರಪುರ