ಯಾದಗಿರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಲ್ಲೂಕಿನ ರಾಮಸಮುದ್ರಾ ಗ್ರಾಮದ ಪದ್ಮಮ್ಮ ನಾಗರಾಜ ಅವರ ಕುಟುಂಬಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶ್ರಣೀಕಕುಮಾರ ದೋಖಾ ಅವರು ಹಸುವನ್ನು ದಾನವಾಗಿ ನೀಡಿದ್ದಾರೆ.
ಎದೆಹಾಲು ಮೂರೂ ಮಕ್ಕಳಿಗೆ ಸಾಲದಾಗಿವೆ ಎಂದು ಪದ್ಮಾ ಅವರು ಅಲವತ್ತುಕೊಂಡದ್ದನ್ನು ತಿಳಿದ ದೋಖಾ ಅವರು ಹತ್ತಿರದ ಕಣೇಕಲ್ ಗ್ರಾಮದಲ್ಲಿನ ಹಸು ಮತ್ತು ಕರುವನ್ನು ₹15,000 ಕ್ಕೆ ಖರೀದಿಸಿ ಕುಟುಂಬಕ್ಕೆ ಹಸ್ತಾಂತರಿಸಿದರು.
‘ಬಡ ಕುಟುಂಬಕ್ಕೆ ನೆರವು ನೀಡಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಅದರಂತೆ ತ್ರಿವಳಿ ಮಕ್ಕಳು ಆರೋಗ್ಯಯುತವಾಗಿ ಬೆಳೆಯಲಿ ಎಂಬ ಆಶಯದಿಂದ ಹಸುವನ್ನು ನೀಡಿದ್ದೇನೆ’ ಎಂದು ಶ್ರಣೀಕಕುಮಾರ ದೋಖಾ ತಿಳಿಸಿದರು.
ಜನಸೇನಾ ಸಂಘಟನೆಯ ಮೈಲಾರಪ್ಪ ಜಾಗಿರದಾರ್, ಮಂಜು ನಾಥ ಬಡಿಗೇರ, ಶರೀಫ್ ಹಾಗೂ ಪದ್ಮಮ್ಮ ಕುಟುಂಬಸ್ಥರು ಇದ್ದರು.